ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಕಂಚಿಕಲ್ ದುರ್ಗ ಗ್ರಾಮದ ಕಾಡುಮಲ್ಲಿಗೆ ಎಸ್ಟೇಟ್ ನಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು 15 ಜನರನ್ನು ಬಂಧಿಸಲಾಗಿದೆ. ವಿಶೇಷವೆಂದರೆ ಪೊಲೀಸರು ಬಂಧಿಸಿದ ಆರೋಪಿಗಳಲ್ಲಿ ಓರ್ವ ಸ್ವತಃ ಪೊಲೀಸ್ ಆಗಿರುವುದು.
ಚಿಕ್ಕಮಗಳೂರು ಜಿಲ್ಲಾ ಎಸ್ಪಿಯವರು ಇಸ್ಪೀಟ್ ಅಡ್ಡೆಯಲ್ಲಿ ಸಿಕ್ಕಿಬಿದ್ದ ಬಣಕಲ್ ಪೊಲೀಸ್ ಠಾಣೆ ಪೇದೆಯನ್ನು ಸಸ್ಪೆಂಡ್ ಮಾಡಿದ್ದಾರೆ.
ಕಂಚಿನಕಲ್ ದುರ್ಗದ ಕಾಡುಮಲ್ಲಿಗೆ ಎಸ್ಟೇಟ್ ನಲ್ಲಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದಾಗ ಚಿಕ್ಕಮಗಳೂರು ಸೆನ್ ಠಾಣೆ ಇನ್ಸ್ಪೆಕ್ಟರ್ ಗವಿರಾಜ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ 15 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು.
ಬಂದಿತರನ್ನು 1.ಸುಧೀನ್ ಕುಮಾರ್, 2.ಮಹ್ಮದ್ ಜಬಿವುಲ್ಲಾ 3.ತಿಮ್ಮ 4.ಉಮೇಶ್ 5.ಶಿವರೂಪ 6.ರಘು ವೈ.ಬಿ 7.ರಾಜೇಶ್ 8.ಶಂಕರ 9.ಪ್ರಮೋದ ಪಿ.ಎಸ್ 10.ಸತೀಶ್ 11. ತೇಜ ಸಿ.ಆರ್ 12. ಚಂದ್ರಶೇಖರ್ 13.ಮಧು, ಆರ್ ಗೌಡ, ಕಾಡು ಮಲ್ಲಿಗೆ ಎಸ್ಟೇಟ್ 14.ವೆಂಕಟೇಶ್ ಮಾಕೋನಹಳ್ಳಿ 15.ಶ್ರೀನಾಥ್ ಕಣತಿ ಎಂದು ಗುರುತಿಸಲಾಗಿದೆ.

ಬಂಧಿತರಲ್ಲಿ ಚಂದ್ರಶೇಖರ್ ಬಣಕಲ್ ಠಾಣೆಯ ಪೇದೆಯಾಗಿದ್ದು, ಕಾನೂನು ಬಾಹೀರ ಕೃತ್ಯದಲ್ಲಿ ತೊಡಗಿದ್ದ ಮತ್ತು ಕಾನೂನು ಬಾಹೀರ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಇವರನ್ನು ಚಿಕ್ಕಮಗಳೂರು ಜಿಲ್ಲಾ ಎಸ್ಪಿ ವಿಕ್ರಂ ಅಮಟೆಯವರು ಅಮಾನತು ಮಾಡಿದ್ದಾರೆ.
ಸದರಿ ಬಂಧಿತ ಪೊಲೀಸ್ ಪೇದೆ ಹಾಸನ ಮೂಲದ ಮಾಜಿ ಸೈನಿಕರಾಗಿದ್ದು, ತನ್ನ ಡ್ಯೂಟಿಗೆ ರಜೆ ಹಾಕಿ ಇಸ್ಪಿಟ್ ಆಡಲು ಹೋಗಿದ್ದರು ಎನ್ನಲಾಗಿದೆ. ಕಾನೂನು ಕಾಪಾಡಬೇಕಾದ ಪೊಲೀಸ್ ಸಿಬ್ಬಂದಿಯೇ ಜೂಜುಕೋರರೊಂದಿಗೆ ಸೇರಿಕೊಂಡು ಇಸ್ಪಿಟ್ ಅಡ್ಡೆಯಲ್ಲಿ ಸಿಕ್ಕಿಬಿದ್ದಿರುವುದು ಇಲಾಖೆಗೆ ಮುಜುಗರ ಉಂಟುಮಾಡಿದೆ.
ಬಂಧಿತರಿಂದ 1,53,470 ರೂ ನಗದು, ಮೂರು ಕಾರು ಮತ್ತು 10 ಮೊಬೈಲ್ ಪೋನ್ಗಳನ್ನ ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಐ ಗವಿರಾಜ್, ಆರ್ ಪಿ , ಪಿಎಸ್ಐ ರಘುನಾಥ್ ಹಾಗೂ ಸಿಬ್ಬಂದಿಗಳಾದ ಶಶಿಧರ್ ಜಿ.ಕೆ, ರಾಜು ಡಿ.ಎಸ್, ಅನ್ವರ್ ಪಾಷಾ, ರಮೇಶ್ ಎನ್.ಆರ್, ಹರೀಶ್ ಟಿ.ಕೆ, ಧರ್ಮರಾಜ್, ಬಷೀರ್ ಅಹ್ಮದ್ ಭಾಗವಹಿಸಿದ್ದರು.
ಇಲ್ಲಿ ಅನೇಕ ದಿನಗಳಿಂದ ಇಸ್ಪೀಟ್ ಅಡ್ಡೆ ನಡೆಯುತ್ತಿತ್ತು ಎನ್ನಲಾಗಿದೆ. ಪೊಲೀಸ್ ಸಿಬ್ಬಂದಿಯೇ ಇವರೊಂದಿಗೆ ಶಾಮೀಲಾಗಿದ್ದರಿಂದ ಇಲ್ಲಿ ರಾಜಾರೋಷವಾಗಿ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ.
ಬಂದಿತರಲ್ಲಿ ಸ್ಥಳೀಯ ಐದಳ್ಳಿಯ ಓರ್ವ ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ತಾನು ಶಾಸಕರ ಆಪ್ತ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ ಎನ್ನಲಾಗಿದೆ. ಈತನು ಈ ಹಿಂದೆಯೂ ಇಸ್ಪೀಟ್ ದಂಧೆಯಲ್ಲಿ ತೊಡಗಿದ್ದಾಗ ಬಂಧನಕ್ಕೊಳಗಾಗಿದ್ದ ಎಂದು ತಿಳಿದುಬಂದಿದೆ. ಇದಕ್ಕಾಗಿ ಪಕ್ಷದಿಂದ ಸಸ್ಪೆಂಡ್ ಆಗಿದ್ದ ಆದರೆ ಇತ್ತೀಚೆಗೆ ಮತ್ತೆ ಪಕ್ಷದಲ್ಲಿ ಸಕ್ರಿಯನಾಗಿದ್ದಾನೆ. ಈತ ನಡೆಸುವ ಇಸ್ಪಿಟ್ ಅಡ್ಡೆಯಿಂದ ಅನೇಕ ಕುಟುಂಬಗಳು ಬೀದಿಪಾಲಾಗಿವೆ. ಮೂರ್ನಾಲ್ಕು ಬಾರಿ ಕೇಸು ದಾಖಲಾಗಿದ್ದರು ಈತ ತನ್ನ ಕಸುಬು ಬಿಟ್ಟಿಲ್ಲ. ಇಂತಹವರ ಬಗ್ಗೆ ಕ್ಷೇತ್ರದ ಶಾಸಕರು ಎಚ್ಚರದಿಂದ ಇರಬೇಕಾಗಿದೆ ಎಂದು ಪಕ್ಷದ ಹಿರಿಯ ಮುಖಂಡರು ಎಚ್ಚರಿಸಿದ್ದಾರೆ.


