ಕಛೇರಿಗಳಲ್ಲಿ ಪ್ರಿಂಟರ್ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಪ್ರಿಂಟರ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಕಡೂರು ಪೋಲೀಸರು ಯಶಸ್ವಿಯಾಗಿದ್ದಾರೆ.
ಮೆಸ್ಕಾಂ ಕಛೇರಿಯಲ್ಲಿ 03 ಪ್ರಿಂಟರ್ ಗಳು ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿಕೊಂಡ ಕಡೂರು ಪೊಲೀಸರು ಅನುಮಾನಾಸ್ಪದವಾಗಿ ಸಿಕ್ಕ ವ್ಯಕ್ತಿಯನ್ನು ಹಿಡಿದು ಆತನ ಬಳಿ ಕ್ಯಾರಿ ಬ್ಯಾಗ್ ನಲ್ಲಿದ್ದ ಒಂದು ಪ್ರಿಂಟರ್ ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು.
ವಶಕ್ಕೆ ಪಡೆದ ಆಕಾಶ್ ಸುಭಾಷ್ ( 25 ವರ್ಷ,) ತುಮಕೂರು ಜಿಲ್ಲೆಯ ತುರುವೇಕೆರೆಯ ಅಮ್ಮಸಂದ್ರ ವಾಸಿಯಾಗಿದ್ದು, ಎನ್.ಜಿ.ಓ. ದಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಡೂರು ಟೌನ್ ಮೆಸ್ಕಾಂ ಕಛೇರಿ ಮತ್ತು ಬಾಲಕಿಯರ ಜೂನಿಯರ್ ಕಾಲೇಜು ಸೇರಿದಂತೆ ಅಜ್ಜಂಪುರ ತಾಲ್ಲೂಕ್ ಕಚೇರಿ, ಬೀರೂರು ಟೌನ್ ಬಿ.ಇ.ಓ. ಕಚೇರಿ, ಬೀರೂರು ಜೂನಿಯರ್ ಕಾಲೇಜು, ಬೀರೂರು ಮುನ್ಸಿಪಲ್ ಕಚೇರಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಾದ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ, ಗುಬ್ಬಿ ಕೋರ್ಟ್, ತಾಲ್ಲೋಕು ಕಛೇರಿ, ತಿಪಟೂರು ತಾಲ್ಲೂಕ್ ಕಛೇರಿ ಮತ್ತು ಬೆಸ್ಕಾಂ ಕಛೇರಿ, ನಿಟ್ಟೂರು ಗ್ರಾಮ ಪಂಚಾಯ್ತಿ ಕಛೇರಿ, ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕ್ ಕಛೇರಿ, ಮಧುಗಿರಿ, ಕೊರಟಗೆರೆ, ಶಿರಾ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ, ಪಾಂಡವಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕುಣಿಗಲ್, ನೆಲಮಂಗಲ ಮತ್ತು ಇತರೆ ಸರ್ಕಾರಿ ಕಛೇರಿಗಳಲ್ಲಿ ಸುಮಾರು 79 ಕ್ಕೂ ಹೆಚ್ಚು ಪ್ರಿಂಟರ್ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.
ಈ ಬಗ್ಗೆ ಆರೋಪಿಯಿಂದ ಮೇಲ್ಕಂಡಂತೆ ಸರ್ಕಾರಿ ಕಛೇರಿಗಳಲ್ಲಿ ಕಳವು ಮಾಡಿರುವ ಪ್ರಿಂಟರ್ ಗಳನ್ನು ತಿಪಟೂರು ಮತ್ತು ಬೆಂಗಳೂರಿನಲ್ಲಿ ವಶಪಡಿಸಿಕೊಂಡಿರುತ್ತದೆ. ವಶಪಡಿಸಿಕೊಂಡ 79 ಪ್ರಿಂಟರ್ ಗಳ ಒಟ್ಟು ಮೌಲ್ಯ ಸುಮಾರು 6.32.000-00 ರೂಗಳಾಗಿದ್ದು, ಪ್ರಕರಣದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಯ ಪತ್ತೆಗೆ ರಚಿಸಿದ ತನಿಖಾ ತಂಡದಲ್ಲಿ ಪಿಎಸ್ಐ ರವರುಗಳಾದ ನವೀನ್ ಎನ್.ಪಿ. ಮತ್ತು ಪವನ್ ಕುಮಾರ್, ಮಂಜುನಾಥಸ್ವಾಮಿ, ಕುಚೇಲ, ಸ್ವಾಮಿ ,ದೇವರಾಜ್, ಬೀರೇಶ, ಮಧು, ಹರೀಶ, ಮಹಮ್ಮದ್ ರಿಯಾಜ್, ಈಶ್ವರಪ್ಪ, ಕಿಶೋರ್, ರವಿ ಕುಮಾರ್, ಧನಪಾಲ ನಾಯ್ಕ, ಜಯಮ್ಮ ಮತ್ತು ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ವಿಭಾಗದ ನಯಾಜ್ ಅಜುಂ ಮತ್ತು ಅಬ್ದುಲ್ ರಬ್ಬಾನಿ ಕಾರ್ಯ ನಿರ್ವಹಿಸಿದ್ದರು.
ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ, ಬಹುಮಾನವನ್ನು ಘೋಷಿಸಿದ್ದಾರೆ.



