ಮುಂಗಾರು ಮಳೆಗೆ ಮೊದಲ ಬಲಿಯಾಗಿದೆ. ಚಿಕ್ಕಮಗಳೂರು ತಾಲೂಕಿನ ಕುರುಬರಹಳ್ಳಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ನಾಗಮ್ಮ (65) ಮೃತ ಮಹಿಳೆ. ಬೇಲೂರು ತಾಲೂಕಿನ ಹೆಬ್ಬಾಳ ತಿಮ್ಮನಹಳ್ಳಿಯ ನಾಗಮ್ಮ, ತಮ್ಮ ಮಗಳ ಮನೆ ಕುರುಬರಹಳ್ಳಿಗೆ ಶುಂಠಿ ಬಿತ್ತನೆಗೆ ಬಂದಿದ್ದರು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಭಾನುವಾರ ಬೆಳಗ್ಗೆ ಅತ್ತೆ-ಮಾವನನ್ನು ಶುಂಠಿ ಬಿತ್ತನೆಗೆಂದು ಅಳಿಯನೇ ಹೋಗಿ ಕರೆದುಕೊಂಡು ಬಂದಿದ್ದರು. ಇನ್ನೂ ಹೊಲದಲ್ಲಿ ಒಟ್ಟು 12 ಜನ ಕೆಲಸ ಮಾಡುತ್ತಿದ್ದರು. ಉಳಿದವರು ಅಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



