ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅರಣ್ಯಕ್ಕೆ ಬೆಂಕಿ ಇಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆಳಗೋಡು ತುಂಗಭದ್ರಾ ಮೀಸಲು ಅರಣ್ಯ ಪ್ರದೇಶದ ಭತ್ತದರಾಶಿ ಗುಡ್ಡದಲ್ಲಿ ಕಾಡಿಗೆ ಬೆಂಕಿ ಇಡುತ್ತಿದ್ದ ಆರೋಪಿಗಳಾದ ದೇವರಾಜ್, ಗಗನ್, ರಕ್ಷಣ್, ಉಮೇಶ್, ಎಂಬ ನಾಲ್ವರು ಯುವಕರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.
ಯುವಕರಿಂದ ಎರಡು ಕತ್ತಿ, ನಾಲ್ಕು ಮೊಬೈಲ್ ಫೋನ್ಗಳು, ಸೇರಿದಂತೆ ಬೆಂಕಿ ಇಡಲು ಬಳಸುತ್ತಿದ್ದ ಲೈಟರ್ ಹಾಗೂ ಬೆಂಕಿ ಪೊಟ್ಟಣಗಳನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಲಾಗಿದೆ. ಇದೀಗ ಕಿಡಿಗೇಡಿಗಳನ್ನು ವಶಕ್ಕೆ ಪಡೆದ ನಂತರ ಜಿಲ್ಲೆಯಲ್ಲಿ ನಡೆದ ಕಾಡ್ಗಿಚ್ಚು ಪ್ರಕರಣಗಳು ಕಿಡಿಗೇಡಿಗಳ ಕೃತ್ಯದಿಂದಲೇ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.
ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ಸಂಭವಿಸಿದ ಪರಿಣಾಮ 400 ಎಕರೆಗೂ ಅಧಿಕ ಪ್ರದೇಶ ಹುಲ್ಲುಗಾವಲು ಅಪಾರ ಪ್ರಮಾಣದ ಸಸ್ಯ ಸಂಪತ್ತು ಹಾಗೂ ಕೀಟಗಳು ಬಲಿಯಾಗಿದ್ದವು.
ಒಂದರ ಹಿಂದೆ ಒಂದು ಜಿಲ್ಲೆಯಾದ್ಯಂತ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ ಆಕಸ್ಮಿಕವಾಗಿ ಈ ರೀತಿ ಪ್ರಕರಣಗಳು ಸಂಭವಿಸುತ್ತಿವೆಯೇ ಅಥವಾ ಇದು ಕಿಡಿಗೇಡಿಗಳ ಕೃತ್ಯವೋ ಎಂದು ತಿಳಿಯಲು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಲಾಗಿತ್ತು. ಜೊತೆಗೆ ಡೋನ್ ಕ್ಯಾಮರಾಗಳನ್ನು ಬಳಸಿ ಕಿಡಿಗೇಡಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು.



