ಮಲೆನಾಡು ಭಾಗದಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದು ಬಹುತೇಕ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಬಿರುಬೇಸಿಗೆಯಿಂದ ಒಣಗಿ ನಿಂತಿದ್ದ ಭೂಮಿಗೆ ಮಳೆಯಿಂದ ತೊಯ್ದು ಗಿಡಮರಗಳು ನಳನಳಿಸಿವೆ.
15 ದಿನದ ಹಿಂದೆ ಕಾಫಿಗೆ ಹೂವಿನ ಮಳೆಯಾಗಿತ್ತು. ಇದೀಗ ಬಂದ ಮಳೆ ಕಾಫಿಗೆ ಬ್ಯಾಕಿಂಗ್ ನೀರಾವರಿ ಆಗಿದ್ದು ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಬುಧವಾರ ಮೂಡಿಗೆರೆ ಪಟ್ಟಣದ ಸುತ್ತಮುತ್ತ ಉತ್ತಮ ಮಳೆಯಾಗಿದೆ ಮಧ್ಯಾಹ್ನ 2-30ರಿಂದ ಪ್ರಾರಂಭವಾದ ಮಳೆ ಆರಂಭದಲ್ಲಿ ಬಿರುಸಿನಿಂದ ಬಂದ ನಂತರ ಸಂಜೆ 4-30ರ ವರೆಗೆ ಸಣ್ಣಪ್ರಮಾಣದಲ್ಲಿ ಬರುತ್ತಲೇ ಇತ್ತು. ಸುಮಾರು ಒಂದು ಇಂಚಿಗೂ ಅಧಿಕ ಪ್ರಮಾಣದ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಬಾಳೆಹೊನ್ನೂರು, ಕಳಸ, ಹಿರೇಬೈಲ್, ಬಾಳೂರು, ಬಣಕಲ್, ಜನ್ನಾಪುರ, ಆಲ್ದೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.
ಮಾಗುಂಡಿ, ಗಬ್ಗಲ್ ಸುತ್ತಮುತ್ತ ಸುಮಾರು ಒಂದೂಕಾಲು ಇಂಚು, ಬಾಳೆಹೊಳೆ ಒಂದೂವರೆ ಇಂಚು, ಬಣಕಲ್ ಸುತ್ತಮುತ್ತ 60 ರಿಂದ 90 ಸೆಂಟ್ಸ್, ಬಾಳೆಹೊನ್ನೂರು ಒಂದೂವರೆ ಇಂಚು, ಗೋಣಿಬೀಡು ಹೊಸಳ್ಳಿ 60 ಸೆಂಟ್ಸ್, ಕುಂದೂರು ಒಂದೂಕಾಲು ಇಂಚು, ಬೇಲೂರು ತಾಲ್ಲೂಕು ಚೀಕನಹಳ್ಳಿ 1.30 ಇಂಚು.
ಬಣಕಲ್, ಪಲ್ಗುಣಿ, ಸಬ್ಬೆನಹಳ್ಳಿ, ಮುಂತಾದ ಕಡೆ ಧಾರಕಾರ ಮಳೆಯಾಯಿತು. ವಿಪರೀತ ಗಾಳಿಗೆ ಬಾಳೂರು ಸಮೀಪದ ಕಲ್ಲಕ್ಕಿ ಮುಖ್ಯ ರಸ್ತೆಗೆ ಬೃಹತ್ ಮರ ಉರುಳಿ ಕೆಲವು ಕಾಲ ಸಂಚಾರ ಸ್ಥಗಿತವಾಗಿತ್ತು. ಸ್ಥಳೀಯರಿಂದ ಮರವನ್ನು ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮರ ಬಿದ್ದ ಪರಿಣಾಮದಿಂದ ಶೃಂಗೇರಿ ಕೊಟ್ಟಿಗೆಹಾರ ರಸ್ತೆ ಕೆಲಕಾಲ ಸಹಿತಗೊಂಡಿತ್ತು.
ಕಾಫಿ ಬೆಳೆಗೆ ನೀರಿಲ್ಲದೆ ಕಾಫಿ ಗಿಡಗಳು ಹೂ ಅರಳಿ ಒಣಗುತ್ತಿದ್ದು ಮಳೆಯಿಂದ ಕಾಫಿ ಬೆಳೆಗೆ ಅನುಕೂಲವಾಯಿತು. ಕಾಫಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿತು. ಕೆಲವು ಆಯ್ದ ಪ್ರದೇಶಗಳಲ್ಲಿ ಮಳೆಯಾಗಿಲ್ಲ. ಇದು ಆ ಪ್ರದೇಶದ ರೈತರನ್ನು ಚಿಂತೆಗೆ ಈಡು ಮಾಡಿದೆ.
ಗುರುವಾರವೂ ಕೂಡ ರಾಜ್ಯದ ಹಲವೆಡೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮಳೆಯಾಗದೇ ಇರುವ ಪ್ರದೇಶದ ಜನರು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.



