ಶ್ರೀ ಕ್ಷೇತ್ರ ದೇವರುಂದದ ರಾಮೇಶ್ವರ ಸನ್ನಿಧಿಯಲ್ಲಿ ನೆರವೇರಲಿರುವ ಯುಗಾಧಿ ಜಾತ್ರಾ ಮಹೋತ್ಸವಕ್ಕೆ ಸದ್ಭಕ್ತರನ್ನು ದೇವಸ್ಥಾನ ಟ್ರಸ್ಟ್ ವತಿಯಿಂದ ಆಹ್ವಾನಿಸಲಾಗಿದೆ.
ದೇವರುಂದ ಶ್ರೀ ರಾಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಚಿಪ್ರಗುತ್ತಿ ಪ್ರಶಾಂತ್ ಹಾಗೂ ಸಮಿತಿಯ ಸದಸ್ಯರು ಸರ್ವರನ್ನು ಜಾತ್ರಾ ಮಹೋತ್ಸವ ಮತ್ತು ರಥೋತ್ಸವಕ್ಕೆ ಭಕ್ತಿಪೂರ್ವಕವಾಗಿ ಆಹ್ವಾನಿಸಿದ್ದಾರೆ.

ಚಿಪ್ರಗುತ್ತಿ ಪ್ರಶಾಂತ್ ಅವರು ಪತ್ರಿಕೆಗೆ ಈ ಬಗ್ಗೆ ಮಾಹಿತಿ ನೀಡಿ ಶ್ರೀ ಕ್ಷೇತ್ರ ದೇವರುಂದವು ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಹೊಂದಿದೆ. ಇಲ್ಲಿನ ರಾಮೇಶ್ವರ ದೇವರ ಲಿಂಗವನ್ನು ಸ್ವತಃ ಪರಶುರಾಮರೇ ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿಯಿದೆ. ಯುಗಾಧಿಯಂದು ಪ್ರತಿವರ್ಷದಂತೆ ಈ ವರ್ಷವೂ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಾರ್ಚ್ 28 ರಿಂದ 30 ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಲಿವೆ.
ಮಾರ್ಚ್ 30 ಭಾನುವಾರ ಶ್ರೀ ಪಾರ್ವತಿ ರಾಮೇಶ್ವರ ದೇವರ ದಿವ್ಯ ಮಹಾರಥೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಜಾತ್ರೆಗೆ ಬರುವ ಭಕ್ತರ ವಾಹನ ನಿಲುಗಡೆ, ದೇವರ ದರ್ಶನ ಸೇರಿದಂತೆ ಎಲ್ಲೂ ಗೊಂದಲಗಳು ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಗ್ರಾಮಸ್ಥರ ಮತ್ತು ರಾಮೇಶ್ವರನ ಅರಾಧಕರ ಸಹಕಾರದಿಂದ ಎಲ್ಲಾ ತಯಾರಿಗಳು ಸುಸೂತ್ರವಾಗಿ ನೆರವೇರುತ್ತಿವೆ. ಜಿಲ್ಲೆ ಹೊರ ಜಿಲ್ಲೆ ಮತ್ತು ಹೊರರಾಜ್ಯಗಳ ಸಾವಿರಾರು ಭಕ್ತರು ಯುಗಾಧಿಯಂದು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಅವರೆಲ್ಲರಿಗೆ ಕುಡಿಯುವ ನೀರಿನ ವ್ಯವಸ್ಥೆ, ಉಪಹಾರ, ದೇವಸ್ಥಾನದ ವತಿಯಿಂದಲೇ ಹಣ್ಣುಕಾಯಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.
ಸದ್ಭಕ್ತರು ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ರಾಮೇಶ್ವರನ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದ್ದಾರೆ.



