bakki 1

 

 

ಮೂಡಿಗೆರೆ ತಾಲ್ಲೂಕು ಬಕ್ಕಿ ಗ್ರಾಮದ ಸುಗ್ಗಿ ಮಂದಿನಲ್ಲಿ ಹೊಯ್ಸಳರ ಕಾಲದ 2 ವೀರಗಲ್ಲು ಶಾಸನಗಳು ಪತ್ತೆಯಾಗಿವೆ. ಶಾಸನ ಸಂಶೋಧಕರಾದ ಮೇಕನಗದ್ದೆ ಲಕ್ಷ್ಮಣಗೌಡ ಮತ್ತು ಬಕ್ಕಿ ಗ್ರಾಮದ ಬಿ.ಬಿ.ಸಂಪತ್ ಕುಮಾರ್ ಅವರು ಅಪ್ರಕಟಿತ ಶಾಸನಗಳ ಅಚ್ಚು ತೆಗೆದು ಶಾಸನ ತಜ್ಞ ಮೈಸೂರಿನ ಹೆಚ್.ಎಂ.ನಾಗರಾಜ ರಾವ್ ಅವರಿಗೆ ಕಳುಹಿಸಿಕೊಟ್ಟಿದ್ದರು.

ಹೊಯ್ಸಳರ ವೀರಬಲ್ಲಾಳನ ಕಾಲಕ್ಕೆ ಸೇರಿರುವುದಾಗಿ ಪರಿಶೀಲಿಸಿ ಪಠ್ಯ ತಯಾರಿಸಿರುವ ಶಾಸನವೆಂದು ತಿಳಿದು ಬಂದಿದೆ. ಎರಡು ಶಾಸನಗಳಲ್ಲಿ ಒಂದರಲ್ಲಿ ಸ್ಪಷ್ಟವಾದ ಬರವಣಿಗೆ ಇದೆ. ಇನ್ನೊಂದರಲ್ಲಿ ಅಕ್ಷರಗಳು ಓದಲಾಗದ ಸ್ಥಿತಿಯಲ್ಲಿವೆ. ಮೊದಲನೆ ಶಾಸನದಲ್ಲಿ ಎರಡು ಪಟ್ಟಿಗಳಲ್ಲಿ ಬರವಣಿಗೆ ಇದೆ. ಮೂರು ಪಟ್ಟಿಗಳಲ್ಲಿ ಆಕರ್ಷಕವಾದ ಕೆತ್ತನೆಗಳಿವೆ. ಮೊದಲನೇ ಪಟ್ಟಿಯಲ್ಲಿ 3 ಸಾಲುಗಳಿವೆ. ಶಾಸನ ಹಲವು ಸಾಂಪ್ರದಾಯಿಕ ಬಿರುದುಗಳಿಂದ ಆರಂಭವಾಗುತ್ತದೆ ಹೊಯ್ಸಳ ರಾಜ ವೀರಬಲ್ಲಾಳರ ಆಳ್ವಿಕೆಯ ಕಾಲದ ಪ್ಲವಸಂವತ್ಸರದಲ್ಲಿ ನಡೆದ ಹೋರಾಟದಲ್ಲಿ ಮಡಿದ ವೀರನ ಉಲ್ಲೇಖವಿದೆ.

2ನೇ ಪಟ್ಟಿಯಲ್ಲಿ 4 ಸಾಲುಗಳಿವೆ. ಕಲ್ಲಿನ ಕೆತ್ತನೆ ಅಕ್ಷರ ಅಳಿಸಿ ಹೋಗಿರುವುದರಿಂದ ವೀರನ ಹೆಸರು ಮತ್ತಿತರ ವಿವರಗಳು ಸ್ಪಷ್ಟವಾಗುತ್ತಿಲ್ಲ. ವೀರನ ನೆನಪಿಗೋಸ್ಕರ ಬಲ್ಲಾಳದೇವ ಈ ವೀರಗಲ್ಲು ತಯಾರಿಸಿದಂತೆ ತಿಳಿದು ಬರುತ್ತದೆ. ಕೊನೆಯಲ್ಲಿ ಶಾಸನವನ್ನು ಹಾಳುಮಾಡಿದವರಿಗೆ ಒದಗುವ ಪಾಪದ ಕುರಿತು ಶಾಪಾಶಯ ವಾಕ್ಯಗಳಿವೆ. ಎರಡನೆಯ ಕಲ್ಲಿನಲ್ಲಿ ಅಕ್ಷರಗಳು ಪೂರ್ತಿ ಸವೆದಿರುವುದರಿಂದ ಯಾವ ಮಾಹಿತಿಯು ಸ್ಪಷ್ಟವಾಗಿ ಸಿಗುತ್ತಿಲ್ಲ. ಆದರೆ ಎರಡು ಕಲ್ಲುಗಳಲ್ಲಿ ಕೆತ್ತಿರುವ ಶಿಲ್ಪ ಸಾವಿರ ವರ್ಷ ಕಳೆದರೂ ತನ್ನ ನೈಜತೆಯನ್ನು ಉಳಿಸಿಕೊಂಡು ಆಕರ್ಷಣೀಯವಾಗಿದೆ.

ಪಠ್ಯ ಲಭ್ಯವಾಗಿರುವ ವೀರಗಲ್ಲಿನಲ್ಲಿ ಕೆಳಗಿನ ಪಟ್ಟಿಯಲ್ಲಿ ನೆಲದ ಮೇಲೆ ನಿಂತ ವೀರನೊಬ್ಬ ಕುದುರೆ ಮೇಲೆ ಕುಳಿತು ಯುದ್ಧ ಮಾಡುತ್ತಾ ಎದುರಾಳಿಯೊಂದಿಗೆ ಹೋರಾಡುತ್ತಿರುವ ಕೆತ್ತನೆಯಿದೆ. ಮೇಲಿನ ಪಟ್ಟಿಯಲ್ಲಿ ಅಪ್ಸರೆಯರನ್ನು ಸುರಲೋಕಕ್ಕೆ ಕರೆತರುವ ಚಿತ್ರವಿದೆ. ಮೂರನೆಯ ಪಟ್ಟಿಯಲ್ಲಿ ವೀರನಿಗೆ ವೀರಸ್ವರ್ಗ ಲಭಿಸಿ ಅಲ್ಲಿ ದೇವತೆಗಳಿಂದ ಪೂಜೆಗೊಳ್ಳುತ್ತಿರುವ ಚಿತ್ರಣದೊಂದಿಗೆ ಸೂರ್ಯ, ಚಂದ್ರ, ನಂದಿ, ತ್ರಿಶೂಲಗಳಿವೆ. ವೀರನ ತ್ಯಾಗ ಬಲಿದಾನಗಳು ಚಂದ್ರಾರ್ಕವಾಗಿರಲಿ ಎಂಬುದನ್ನು ವೀರಗಲ್ಲು ಸಂಕೇತಿಸುತ್ತದೆ. ಪಕ್ಕದಲ್ಲಿರುವ ಇನ್ನೊಂದು ವೀರಗಲ್ಲಿನಲ್ಲಿ ಅಕ್ಷರಗಳು ಪೂರ್ಣ ಪ್ರಮಾಣದಲ್ಲಿ ನಶಿಸಿ ಹೋಗಿದೆ ಆದರೆ ಆಕರ್ಷಕ ಶಿಲ್ಪಗಳ ಕೆತ್ತನೆಯಿದೆ.

ಕೆಳಗಿನ ಪಟ್ಟಿಯಲ್ಲಿ ನೆಲದ ಮೇಲೆ ನಿಂತಿರುವ ವೀರನು ಪದಾತಿಗಳೊಂದಿಗೆ ಹೋರಾಡುತ್ತಿರುವ ಚಿತ್ರವಿದೆ. ವೀರನು ಒಂದು ಕೈಯಲ್ಲಿ ಬಿಲ್ಲನ್ನು ಹಿಡಿದು ಬಾಣ ಪ್ರಯೋಗಿಸಿ ಇನ್ನೊಂದು ಕೈಯಲ್ಲಿ ಒರೆಯಿಂದ ಕತ್ತಿಯನ್ನು ಹಿರಿದು ಮೇಲೆ ಎತ್ತಿ ಹಿಡಿದಿರುವ ಅಪರೂಪದ ಚಿತ್ರವಿದೆ. ಮೇಲಿನ 2 ಪಟ್ಟಿಕೆಗಳಲ್ಲಿ ಸಾಮಾನ್ಯವಾದ ಕೆತ್ತನೆಗಳಿವೆ.

ಬಕ್ಕಿ ಗ್ರಾಮದ ಸುಗ್ಗಿ ಮಂದಿನಲ್ಲಿ ತ್ರಿಪುರ ಸಾವಿರದ ಸುಗ್ಗಿ ಹಬ್ಬದ 3 ಮತ್ತು 4 ದಿನಗಳಲ್ಲಿ ಸುಗ್ಗಿ ಉತ್ಸವ ನಡೆಯುತ್ತದೆ. ಸುಗ್ಗಿ ಹಬ್ಬ ಆರಂಭವಾದ ನಂತರ ಬುಧವಾರ ರಾತ್ರಿ ತ್ರಿಪುರ ಸಾವಿರದ ಬಕ್ಕಿ ಹ್ಯಾರಗುಡ್ಡೆ ಮತ್ತು ಪಟ್ಟದೂರು ಗ್ರಾಮದ ದೇವರುಗಳು ನೆರೆದು ಹನ್ನೆರಡು ಮಹಾಮಂಗಳಾರತಿ ನೆರವೇರಿಸಿ ಇರುಳು ಸುಗ್ಗಿ ನಡೆಸಿ ಹಿಂದಿರುಗುತ್ತಾರೆ. ಮರುದಿನ ಅಪರಾಹ್ನ ಹಗಲು ಸುಗ್ಗಿ ನಡೆಯುತ್ತದೆ. ಶಾಸನ ದೊರೆತಿರುವ ಈ ಸ್ಥಳ ತ್ರಿಪುರ ಸಾವಿರದ ಸುಗ್ಗಿಹಬ್ಬ ನಡೆಯುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ ಎಂದು ಗ್ರಾಮದ ಸಂಪತ್ ಕುಮಾರ್ ವಿವರಿಸಿದ್ದಾರೆ.

ಇದೀಗ ಈ ಶಾಸನದ ಮೂಲಕ ಇಲ್ಲಿನ ಇತಿಹಾಸ ಮತ್ತು ಪರಂಪರೆ ಹೊಯ್ಸಳ ರಾಜರೊಂದಿಗೆ ತಳುಕು ಹಾಕಿಕೊಂಡಿದೆ. ಸಾವಿರ ವರ್ಷದ ಹಿಂದಿನ ಇತಿಹಾಸವನ್ನು ವೀರಗಲ್ಲು ತಿಳಿಸುತ್ತದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ