ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಡಾನೆ ಹಾವಳಿಯಿಂದ ಕೃಷಿಕರು ಮತ್ತು ಸಾರ್ವಜನಿಕರು ಕಂಗಾಲಾಗಿದ್ದಾರೆ. ಈ ಬಗ್ಗೆ ಚರ್ಚಿಸಲು ಮೂಡಿಗೆರೆ ಬೆಳೆಗಾರರ ಸಂಘದ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ಬೆಳೆಗಾರರ ಒಕ್ಕೂಟ, ಮೂಡಿಗೆರೆ ಬೆಳೆಗಾರರ ಸಂಘ ಆಶ್ರಯದಲ್ಲಿ ರೈತರ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿ ; ಕಾಫಿ ಬೆಳೆಯುವ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ನೂರಾರು ಕಾಡಾನೆಗಳು ನಿರಂತರವಾಗಿ ತೋಟಗಳಿಗೆ ಜನವಸತಿ ಪ್ರದೇಶಗಳಿಗೆ ಗುಂಪು ಗುಂಪಾಗಿ ಲಗ್ಗೆ ಇಡುತ್ತಿವೆ. ಹತ್ತಾರು ಜನರು ಕಾಡಾನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಕಾಡಾನೆಗಳು ಒಂದು ಪ್ರದೇಶದಿಂದ ಒಂದು ಪ್ರದೇಶಕ್ಕೆ ನಿರಂತರವಾಗಿ ಸಂಚರಿಸುತ್ತಾ ಅಪಾರ ಪ್ರಮಾಣದ ನಷ್ಟ ಉಂಟು ಮಾಡುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೃಷಿ ಮಾಡುವುದೇ ದುಸ್ತರವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಶಾಶ್ವತ ಪರಿಹಾರ ಒದಗಿಸಲು ಮುಂದಾಗಬೇಕು, ಈ ಬಗ್ಗೆ ಒತ್ತಾಯಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಿಯೋಗ ಕೊಂಡೊಯ್ಯಲಾಗುವುದು ಎಂದರು.
ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಮಾತನಾಡಿ ; ಕಳೆದ ಹತ್ತು ದಿನಗಳ ಹಿಂದ ಸುಮಾರು 40 ಕಾಡಾನೆಗಳು ಚೀಕನಹಳ್ಳಿ ಮೂಲಕ ಮೂಡಿಗೆರೆ ಭಾಗಕ್ಕೆ ಬಂದಿವೆ. ಮಾಕೋನಹಳ್ಳಿ, ಕಾರಬೈಲ್, ನಂದೀಪುರ, ದುಂಡುಗ, ಹಳಸೆ ಭಾಗದಲ್ಲಿ ಬೀಡುಬಿಟ್ಟಿವೆ, ಹಾಗೆಯೇ ಆಲ್ದೂರು ಭಾಗದಲ್ಲಿಯೂ ಕಾಡಾನೆಗಳು ಉಪಟಳ ನೀಡುತ್ತಿವೆ. ಅಲ್ಲಿಂದ ಓಡಿಸಿದರೆ ಇಲ್ಲಿಗೆ, ಇಲ್ಲಿಂದ ಓಡಿಸಿದರೆ ಅಲ್ಲಿಗೆ ಎಂಬಂತೆ ಸುತ್ತಾಡುತ್ತವೆ. ಬೆಳೆಗಳನ್ನು ಸಂಪೂರ್ಣ ನಾಶಮಾಡುತ್ತಿವೆ. ಇದರ ಬಗ್ಗೆ ರೈತರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗಿದೆ. ಇಲ್ಲದೇ ಇದ್ದರೆ ಮಲೆನಾಡು ಭಾಗದಲ್ಲಿ ಜನಜೀವನ ದುಸ್ತರವಾಗಲಿದೆ ಎಂದರು.
ಸಭೆಯಲ್ಲಿ ಕೆಜಿಎಫ಼್ ಮಾಜಿ ಅಧ್ಯಕ್ಷರಾದ ಬಿ.ಎಸ್. ಜಯರಾಂ, ಮೂಡಿಗೆರೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನೂರಾರು ಬೆಳೆಗಾರರು ಭಾಗವಹಿಸಿದ್ದರು.




