ಸಮಾಜದ ಸ್ವಾಸ್ಥ್ಯ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ ಎಂದು ಮೂಡಿಗೆರೆ ಜೇಸಿಐ ಮಾಜಿ ಅಧ್ಯಕ್ಷ ಹೆಚ್.ಅರ್.ಪ್ರದೀಪ್ ಕುಮಾರ್ ಅಭಿಪ್ರಾಯಿಸಿದರು.
ಬುಧವಾರ ಜೇಸಿಐ ಮೂಡಿಗೆರೆ ವತಿಯಿಂದ ಪಟ್ಟಣದ ಜೇಸಿ ಭವನದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇಶದಲ್ಲಿ ಸೈನಿಕರು, ಪೊಲೀಸರು ಮತ್ತು ರೈತ ಕಾರ್ಮಿಕರು ದೇಶದ ಏಳಿಗೆಗಾಗಿ ರಕ್ಷಣೆಗಾಗಿ ದುಡಿಯುತ್ತಿದ್ದಾರೆ. ಪೊಲೀಸ್ ವೃತ್ತಿ ಅತ್ಯಂತ ಕಠಿಣವಾಗಿದೆ. ಪೊಲೀಸರು ದಿನದ 24 ಗಂಟೆಯೂ ಸದಾ ಕರ್ತವ್ಯದ ಕರೆಗೆ ಓಗೊಡಲು ಸಿದ್ದರಿರಬೇಕಾಗುತ್ತದೆ. ಪೊಲೀಸರು ತಮ್ಮ ವೈಯುಕ್ತಿಕ ಮತ್ತು ಕೌಟುಂಬಿಕ ಜೀವನವನ್ನು ಸಮಾಜದ ಸುವ್ಯವಸ್ಥೆಗಾಗಿ ಮುಡಿಪಾಗಿಡುತ್ತಾರೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಸಿಐ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿ ಮಾತನಾಡಿ ; ಜೇಸಿಐ ಸಂಸ್ಥೆಯು ಪ್ರತಿ ತಿಂಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಗೌರವಿಸುವ ಕಾರ್ಯ ನಡೆಸುತ್ತಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ನಾವೆಲ್ಲ ನೆಮ್ಮದಿಯಿಂದ ಇರುವಂತಹ ವಾತಾವರಣ ಸೃಷ್ಟಿಸುವುದರಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದ್ದು, ಇಂತಹ ಉನ್ನತ ಸೇವಾ ಕಾರ್ಯದಲ್ಲಿ ನಿರತರಾಗಿ ಇದೀಗ ನಿವೃತ್ತರಾಗಿರುವ ಪೊಲೀಸ್ ಅಧಿಕಾರಿಗಳನ್ನು ಗೌರವಿಸಲು ಹೆಮ್ಮೆಯೆನಿಸುತ್ತದೆ ಎಂದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಪ್ರಸ್ತುತ ಉತ್ತಮ ಕೃಷಿಕರಾಗಿ ಗುರುತಿಸಿಕೊಂಡಿರುವ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಗೌರವಿಸಲಾಯಿತು.
ನಿವೃತ್ತ ಪೊಲೀಸ್ ಅಧಿಕಾರಿಗಳಾದ ಮಂಜುನಾಥಗೌಡ, ಸೋಮೇಗೌಡ, ಗೋಪಾಲಗೌಡ ಮತ್ತು ಸೋಮಶೇಖರ್ ಇವರುಗಳನ್ನು ಗೌರವಿಸಲಾಯಿತು.
ಗೌರವ ಸ್ವೀಕರಿಸಿದ ನಿವೃತ್ತ ಪೊಲೀಸ್ ಅಧಿಕಾರಿಗಳು ತಮ್ಮ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಜೇಸಿಐ ಮೂಡಿಗೆರೆ ಕಾರ್ಯದರ್ಶಿ ಹಮೀದ್ ಸಬ್ಬೇನಹಳ್ಳಿ, ಕಾರ್ಯಕ್ರಮ ನಿರ್ದೇಶಕಿ ರಾಘವಿ, ಮಹಿಳಾ ಜೇಸಿ ಅಧ್ಯಕ್ಷೆ ರೇಖಾ ನಾಗರಾಜ್,ಜೂನಿಯರ್ ಜೇಸಿ ಅಧ್ಯಕ್ಷೆ ಪ್ರಶಂಸ, ಮಾಜಿ ಅಧ್ಯಕ್ಷರಾದ ಕೆಎಲ್ಎಸ್ ತೇಜಸ್ವಿ, ವಿನೋದ್ ಕುಮಾರ್, ಹರೀಶ್ ಟಿ, ಅತುಲ್ ರಾವ್ ಪ್ರಸನ್ನ ಗೌಡಳ್ಳಿ, ವಿಜಯ್ ಕುಮಾರ್, ರತೀಶ್ ಬೆಟ್ಟಗೆರೆ, ನಯನ ಕಣಚೂರು, ಚಂದ್ರಶೇಖರ್ ಕುನ್ನಳ್ಳಿ,ಮುಂತಾದವರು ಉಪಸ್ಥಿತರಿದ್ದರು.




