ಮೂಡಿಗೆರೆ ತಾಲ್ಲೂಕಿನ ಬೈದುವಳ್ಳಿ, ಊರುಬಗೆ, ಕುಂಬರಡಿ, ಮೂಲರಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಒಂಟಿ ಸಲಗವೊಂದು ಈ ಭಾಗದಲ್ಲಿ ನಿರಂತರವಾಗಿ ಕಳೆದ ಕೆಲವು ದಿನಗಳಿಂದ ಉಪಟಳ ನೀಡುತ್ತಿದೆ.
ಕಳೆದೊಂದು ವರ್ಷದಿಂದ ಈ ಭಾಗದಲ್ಲಿ ಕಾಡಾನೆ ಹಾವಳಿ ಕಡಿಮಯಾಗಿತ್ತು. ಆದರೆ ಇತ್ತೀಚೆಗೆ ಕೆಲ ದಿನಗಳಿಂದ ಒಂಟಿ ಆನೆಯೊಂದು ಹಗಲು ರಾತ್ರಿಯೆನ್ನದೇ ಈ ಭಾಗದಲ್ಲಿ ಗ್ರಾಮಗಳಿಗೆ ಮತ್ತು ತೋಟಗಳಿಗೆ ಲಗ್ಗೆ ಇಡುತ್ತಿದೆ. ಕಾಫಿ ತೋಟಗಳಿಗೆ ನುಗ್ಗಿ ಕಾಫಿ, ಅಡಿಕೆ, ಬಾಳೆ ಮುಂತಾದ ಬೆಳೆಗಳನ್ನು ನಾಶಗೈಯುತ್ತಿದೆ.
ಸಣ್ಣ ಮತ್ತು ಅತಿಸಣ್ಣ ರೈತರೇ ಇಲ್ಲಿ ಹೆಚ್ಚಾಗಿದ್ದು, ಕಷ್ಟಪಟ್ಟು ಬೆಳೆಸಿದ್ದ ಬೆಳೆಗಳನ್ನು ಕಾಡಾನೆ ನಾಶ ಮಾಡುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಅತಿವೃಷ್ಟಿಯಿಂದ ಈ ಬಾರಿ ಬೆಳೆಗಳು ಸಹ ನೆಲಕಚ್ಚಿದ್ದು, ಇದರೊಂದಿಗೆ ಕಾಡಾನೆ ಹಾಗೂ ಕಾಡುಕೋಣಗಳ ಹಾವಳಿಯು ಮಿತಿಮೀರಿದೆ.
ಇತ್ತೀಚೆಗೆ ಬೈದುವಳ್ಳಿ ಗ್ರಾಮದಲ್ಲಿ ತೋಟದ ಕೆಲಸಕ್ಕೆ ಬಂದಿದ್ದ ಮೂಡಿಗೆರೆ ಹೆಸಗಲ್ ಗ್ರಾಮದ ಕಾರ್ಮಿಕರೋರ್ವರು ಕಾಡಾನೆ ದಾಳಿಯಿಂದ ಗಾಯಗೊಂಡಿದ್ದರು. ಈ ಭಾಗದಲ್ಲಿ ಕಾಡಾನೆ ದಾಳಿಯಿಂದ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದೀಗ ಉಪಟಳ ನೀಡುತ್ತಿರುವ ಒಂಟಿಸಲಗ ಜೀವ ಹಾನಿ ಮಾಡುವ ಮುನ್ನು ಆನೆಯನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.



