ಚಿಕ್ಕಮಗಳೂರು ತಾಲ್ಲೂಕು ಬೈಗೂರು ಪ್ರಾಥಮಿಕ ಸಹಕಾರ ಸಂಘದ ಹಂಗರವಳ್ಳಿ ಶಾಖೆಗೆ 3.20 ಲಕ್ಷ ರೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿವ್ವಳ ಲಾಭ ಗಳಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಸಿ. ಅರುಣ್ ಕುಮಾರ್ ತಿಳಿಸಿದರು.
ಅವರು ಶುಕ್ರವಾರ ಹಂಗರವಳ್ಳಿಯಲ್ಲಿ ಬೈಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರ ಸಂಘಕ್ಕೆ ನೂತನ ಕಟ್ಟಡ ಸದಸ್ಯರಿಗೆ ಡಿವಿಡೆಂಟ್ ನೀಡುವುದರ ಜೊತೆಗೆ 10 ಲಕ್ಷ ರೂಗಳವರೆಗೆ ಸಾಲಸೌಲಭ್ಯ ನೀಡಲು ಗುರಿಹೊಂದಲಾಗಿದೆ ಎಂದ ಅವರು, ಶೇ.0 ಬಡ್ಡಿದರದಲ್ಲಿ 5 ಲಕ್ಷ ರೂಗಳವರೆಗೆ ಸಾಲ ನೀಡಬೇಕು. ಷೇರುದಾರರು ಹೊಂದಿರುವ ಜಮೀನು ಆಧಾರದಲ್ಲಿ ಹೆಚ್ಚು ಸಾಲಸೌಲಭ್ಯ ನೀಡಬೇಕೆಂದು ಜಿಲ್ಲಾ ಬ್ಯಾಂಕಿನಲ್ಲಿ ಕೋರಿಕೆ ಸಲ್ಲಿಸಲಾಗಿದೆ ಎಂದರು.
ಖಾಸಗಿ ಬ್ಯಾಂಕ್ಗಳಿಗೆ ಕಡಿಮೆ ಇಲ್ಲದಂತೆ ಪತ್ತಿನ ಸಹಕಾರ ಸಂಘದಲ್ಲಿಯೂ ಎಲ್ಲಾ ರೈತರಿಗೆ ಸುಲಭವಾಗಿ ಸಾಲ ನೀಡಲು ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಮುಚ್ಚುವ ಹಂತದಲ್ಲಿದ್ದ ಪ್ರಾಥಮಿಕ ಸಹಕಾರ ಸಂಘ ಇಂದು 8 ಕೋಟಿ ರೂ ಸಾಲ ಸೌಲಭ್ಯ ನೀಡುವ ಹಂತಕ್ಕೆ ಬೆಳೆದು ನಿಂತಿದೆ. ಇದಕ್ಕೆ ಸಹಕಾರ ನೀಡಿದ ಮಾಜಿ ಅಧ್ಯಕ್ಷರೂ, ನಿರ್ದೇಶಕರುಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಸೇವಾ ಮನೋಭಾವದಿಂದ ಎಲ್ಲರೂ ಸೇವೆ ಸಲ್ಲಿಸಿದಾಗ ಮಾತ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮವಾಗಿ ಆಡಳಿತ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಪಾರದರ್ಶಕ ಚುನಾವಣೆ ನಡೆದು, ಸಹಕಾರ ಸೇವೆಯಲ್ಲಿ ಉತ್ತಮ ಗುರಿ ಹೊಂದಿರುವವರು ಆಯ್ಕೆಯಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ದಿಲೀಪ್ ಹೆಚ್.ಆರ್, ನಿರ್ದೇಶಕರುಗಳಾದ ಹೆಚ್.ಪಿ. ರಮೇಶ್, ಹೆಚ್.ಕೆ ಜಗದೀಶ್, ಬಿ.ಇ ನಾಗೇಶ್, ಹೆಚ್.ಜಿ ಗಣೇಶ್, ಪ್ರದೀಪ್ ಬಿ.ಆರ್, ಸಚ್ಚಿದಾನಂದ, ಮೋಹನ್ಕುಮಾರ್, ಎಂ.ಎನ್ ಸುಜಾತ, ವಸಂತಮ್ಮ, ಹೆಚ್.ಬಿ ಸುರೇಶ್, ಮೇಲ್ವಿಚಾರಕ ರಘು ಕೆ.ಆರ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಪ್ರದೀಶ್ ಹೆಚ್.ಜಿ, ಗಣಕ ನಿರ್ವಾಹಕರಾದ ಯಶೋಧ ಸಿ.ಆರ್, ಮಾರಾಟ ಗುಮಾಸ್ತ ನವೀನ್ ಕೆ.ಸಿ ಉಪಸ್ಥಿತರಿದ್ದರು.



