ಶಿಕ್ಷಣ ವ್ಯವಸ್ಥೆಯನ್ನು ದೂರುವುದನ್ನು ಬಿಟ್ಟು ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದಾಗ ಮಾತ್ರ ಶಿಕ್ಷಣ ವ್ಯವಸ್ಥೆ ಬುಡದಿಂದ ತುದಿಯವರೆಗೆ ಪರಿವರ್ತನೆಯಾಗುತ್ತದೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸೀನಿಯರ್ ಮ್ಯಾನೇಜರ್ ಸಂದೀಪ್ ಎಸ್.ವಶಿಷ್ಠ ಹೇಳಿದರು.
ಅವರು ಮೂಡಿಗೆರೆ ಪಟ್ಟಣದ ರೈತ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ರಾಷ್ಟ್ರೀಯ ಮೌಲ್ಯದ ಬಗ್ಗೆ ಅರಿವು ಶಾಲೆಗಳಲ್ಲಿ ಮಾತ್ರ ಸಿಗಲು ಸಾಧ್ಯ. ನಾವು ಖರ್ಚು ಮಾಡಿದಷ್ಟು ಹಣ ಖಾಲಿಯಾಗುತ್ತದೆ. ಆದರೆ ವಿದ್ಯೆ ಎಷ್ಟು ಖರ್ಚು ಮಾಡಿದರೂ ಮತ್ತಷ್ಟು ವೃದ್ಧಿಸುತ್ತದೆ. ಮಕ್ಕಳ ಭವ್ಯ ಭವಿಷ್ಯ ರೂಪಿಸುವ ಪುಣ್ಯದ ಕಾರ್ಯ ಶಿಕ್ಷಕರಿಗೆ ದೊರಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಶಿಕ್ಷಣದ ದಾರಿಯನ್ನು ಸುಗಮ ಮಾಡಿಕೊಂಡು, ಪ್ರತಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಆತ್ಮವಿಶ್ವಾಸವನ್ನು ಹೊರ ತರುವ ಕಾರ್ಯ ಮಾಡಬೇಕೆಂದು ಹೇಳಿದರು.
ಶಿಕ್ಷಣದ ಮಹತ್ವದ ಬಗ್ಗೆ ಎಷ್ಟೋ ಜನರಿಗೆ ಅರಿವಿಲ್ಲ. ಶಾಲೆಯಲ್ಲಿ ಕಲಿಯುವ ವಿಜ್ಞಾನ ವಿಷಯ ವೈಜ್ಞಾನಿಕ ಮನೋಭಾವ ಉಂಟು ಮಾಡುತ್ತದೆ. ಗಣಿತ ವಿಷಯ ಸ್ಪಷ್ಟತೆಯನ್ನುಂಟು ಮಾಡುತ್ತದೆ. ಹೀಗೆ ಒಂದೊಂದು ವಿಷಯ ತನ್ನದೇ ಆದ ಭಾವನೆ ಮೂಡಿಸುತ್ತದೆ. ಹಾಗಾಗಿ ಶಿಕ್ಷಣ ಕೇವಲ ಅಂಕ ಮತ್ತು ಬೋಧನೆಗೆ ಮಾತ್ರ ಸೀಮಿತಗೊಳಿಸಿದರೆ ಈ ಸಮಾಜ ಭಾವನೆಗಳಿಲ್ಲದ ಸಾಕ್ಷರತೆಯಾಗುತ್ತದೆ. ಅದಕ್ಕಾಗಿ ಶಿಕ್ಷಕ ವೃತ್ತಿಯ ಸಾರ್ಥಕತೆ ಜ್ಞಾನದ ಮೇಲೆ ಪ್ರೀತಿ, ಒಲವು ಹುಟ್ಟಿಸುವಂತಹ ಬೋಧನೆ ಮಾಡಬೇಕಿದೆ ಎಂದು ಹೇಳಿದರು.
ಶಾಸಕಿ ನಯನಾ ಮೋಟಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಬೆನ್ನೆಲುಬಾಗಿ ಪ್ರಮುಖ ಪಾತ್ರ ವಹಿಸುವುದು ರೈತರು ಹಾಗೂ ಶಿಕ್ಷಕರು. ಈ ಸಮಾಜದಲ್ಲಿ ಯಾವುದೇ ಓರ್ವ ವ್ಯಕ್ತಿ ಉನ್ನತ ಸ್ಥಾನ ಪಡೆದಿದ್ದದಾರೆಂದರೆ ಅದರ ಶ್ರೇಯಸ್ಸು ಅವರಿಗೆ ಕಲಿಸಿದ ಶಿಕ್ಷಕರಿಗೆ ಸೇರಬೇಕು. ತಂತ್ರಜ್ಞಾನ ಮುಂದುವರೆದಂತೆ ಜೀವನ ಶೈಲಿಯೂ ಬದಲಾಗುತ್ತಿದೆ. ಹಾಗಾಗಿ ಶಿಕ್ಷಣದ ಜತೆಗೆ ಎಐ (ಆರ್ಟಿಫಿಷಲ್ ಇಂಟಲಿಜೆಂಟ್) ಬಗ್ಗೆ ಶಿಕ್ಷಕರು ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದರು.
ತಾನು ಸರಕಾರಿ ಶಾಲೆಗಳಿಗೆ ಭೇಟಿ ನೀಡಿದಾದ ಶೌಚಾಲಯದ ಬಗ್ಗೆ ಸಂತೃಪ್ತಿಯಾಗಿಲ್ಲ. ಅದಕ್ಕೆ ಬೇಕಾದ ಅನುದಾನ ತಾನು ನೀಡುತ್ತೇನೆಂದು ಹೇಳಿದ್ದೇನೆ. ಸ್ವಚ್ಛತೆ ಮತ್ತು ಶೌಚಾಲಯ ಕಡೆಗಣಿಸಿದರೆ ಈ ದೇಶ ಮುಂದುವರೆಯಲು ಸಾಧ್ಯವಿಲ್ಲ. ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅಲ್ಲದೇ ಆದಷ್ಟು ಶಾಲೆಗಳನ್ನು ಕೆಪಿಎಸ್ ಮಾಡಲು ಚಿಂತಿಸಿದೆ. ಹಾಗಾಗಿ ಸರಕಾರಿ ಶಾಲೆಯಲ್ಲಿ ಮಕ್ಕಳ ಸೇರ್ಪಡೆ ಬಗ್ಗೆ ಗಮನಹರಿಸಬೇಕೆಂದ ಅವರು, ಜಿಲ್ಲಾ ಸರಕಾರಿ ನೌಕರರ ಸಂಘದ ಕಟ್ಟಡ ನಿರ್ಮಾಣಕ್ಕೆ ತಾನು 10 ಲಕ್ಷ ಅನುದಾನ ನೀಡುತ್ತೇನೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ 24 ಮಂದಿ ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಹಳೆಮೂಡಿಗೆರೆ ಗ್ರಾ.ಪಂ. ಅಧ್ಯಕ್ಷ ರಂಜಿತಾ ಉದ್ಘಾಟಿಸಿದರು. ಪ.ಪಂ. ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ರಾಜ್ಯ ಸರಕಾರಿ ನೌಕರರ ಸಂಘದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್, ಡಿಡಿಪಿಒ ತಿಮ್ಮರಾಜ್, ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಸತ್ಯನಾರಾಯಣ, ತಾ.ಪಂ. ಇಒ ದಯಾವತಿ, ಬಿಇಒ ಮೀನಾಕ್ಷಿ, ನೌಕರರ ಸಂಘ ಮತ್ತು ಶಿಕ್ಷಕರ ಸಂಘದ ಜಿಲ್ಲಾ ಮತ್ತು ವಿವಿಧ ತಾಲ್ಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.



