ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22 ರಿಂದ ಅ.7 ರವರೆಗೆ ನಡೆಸಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಮನೆಗೆ ಭೇಟಿನೀಡಿದ ಗಣತಿದಾರರಿಗೆ ಕಾಲಂ ನಂಬರ್ 9 ರಲ್ಲಿ ಒಕ್ಕಲಿಗ ಎಂದು ನಮೂದಿಸುವಂತೆ ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಸಮಾಜ ಬಾಂಧವರಲ್ಲಿ ಮನವಿ ಮಾಡಿದರು.

ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಸರ್ಕಾರ ನಿಗದಿಪಡಿಸಿರುವ ಆಯೋಗದ ಸದಸ್ಯರು ಸುಮಾರು 60 ಕಾಲಂ ಉಳ್ಳ ಕುಟುಂಬದ ವಿವರನ್ನು ಪಡೆಯಲಿದ್ದು, ಒಕ್ಕಲಿಗ ಸಮುದಾಯ ಹಿಂದುಳಿದ ವರ್ಗಗಳ ಪ್ರವರ್ಗ-3(ಎ) ವರ್ಗಕ್ಕೆ ಸೇರಿಸಿದ್ದು, ಕಾಲಂ 9 ರಲ್ಲಿ ಜಾತಿ, ಕಾಲಂ 10 ರಲ್ಲಿ ಉಪಜಾತಿಯನ್ನು ನಮೂದಿಸಬೇಕಾಗಿರುತ್ತದೆ ಎಂದಿದ್ದಾರೆ.
ಉಪಜಾತಿ ಕಾಲಂನಲ್ಲಿ ಸಮುದಾಯದ ಉಪ ಪಂಗಡಗಳಾದ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮದಾರಿ ಒಕ್ಕಲಿಗ, ಗಂಗಡ್ಕರ್ ಒಕ್ಕಲಿಗ, ದಾಸ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಕುಂಚಿಟಿಗ, ಹೆಗ್ಗಡೆ, ರೆಡ್ಡಿ ಇತ್ಯಾದಿ ಉಪಜಾತಿಗಳನ್ನು ನಮೂದಿಸಬೇಕು ಎಂದು ಹೇಳಿದ್ದಾರೆ.
ಕುಟುಂಬಕ್ಕೆ ಸಂಬಂಧಿಸಿದ ವಿವರಗಳಾದ ವಿದ್ಯಾಭ್ಯಾಸ, ವೃತ್ತಿ, ಜಮೀನಿನ ವಿವರ, ಆರ್ಥಿಕ ಸ್ಥಿತಿ ಮುಂತಾದ ನಿಖರವಾದ ವಿವರಗಳನ್ನು ಗಣತಿದಾರರಿಗೆ ನೀಡಬೇಕು. ಈ ಗಣತಿಯು ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು. ಗಣತಿದಾರರು ಸಮೀಕ್ಷೆ ಮಾಡುವಾಗ ಕುಟುಂಬದಲ್ಲಿ ಆರು ವರ್ಷಕ್ಕೂ ಮೇಲ್ಪಟ್ಟವರು ಮಾತ್ರ ಗಣತಿ ಮಾಡಲಿದ್ದು, ಪಡಿತರ ಚೀಟಿ, ಪ್ರತಿಯೊಬ್ಬರ ಆಧಾರ್ ಕಾರ್ಡ್, ಆಧಾರ್ ನೋಂದಣಿ ದಾಖಲೆ ನೀಡಬೇಕೆಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಬೇಕಾದ ಸೌಲತ್ತುಗಳನ್ನು ಕಡ್ಡಾಯವಾಗಿ ಗಣತಿದಾರರಿಗೆ ಸ್ಪಷ್ಟವಾದ ಮಾಹಿತಿಯನ್ನು ನೀಡುವಂತೆ ಅವರು ಕೋರಿದ್ದಾರೆ.



