ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಸೆಪ್ಟೆಂಬರ್ 17 ರಿಂದ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮದಿನ ಆಕ್ಟೋಬರ್ 2 ರವರೆಗೆ ಜಿಲ್ಲಾ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದ ವರೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಜಿಲ್ಲೆ ಹಾಗೂ ಮಂಡಲಗಳಲ್ಲಿ ತಂಡ ರಚನೆಯಾಗಿದ್ದು ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಅಭಿಮಾನಿಗಳು ನಾಗರಿಕರನ್ನು ಒಳಗೊಂಡತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಸ್ವಚ್ಛತಾ ಅಭಿಯಾನ, ಶಾಲೆ-ಶಾಲೇಜು, ಅಂಗನವಾಡಿ, ದೇವಾಲಯಗಳ ಆವರಣ, ಬಸ್ ಸ್ಟಾಂಡ್, ಆಸ್ಪತ್ರೆ, ಹಾಸ್ಟೆಲ್ಗಳು ಹಾಗೂ ಪಾರ್ಕ್ಗಳು ಹೀಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಮಾಡುವ ಮೂಲಕ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದರು.
ತಾಯಿಯ ಹೆಸರಿನಲ್ಲಿ ಸಸಿ ನೆಡುವುದು. ಸೆಪ್ಟೆಂಬರ್ 25 ಪಂಡಿತ್ ದೀನ್ದಯಾಳ್ ಉಪಾಧ್ಯಾಯರವರ ಹಾಗೂ ಗಾಂಧೀಜಿ ಮತ್ತು ಮೋದಿಜೀ ಯವರ ಹೆಸರಿನಲ್ಲಿ ಸಸಿ ನೇಡಲಾಗುವುದು.
ಮಂಡಲ ಹಾಗೂ ಜಿಲ್ಲಾ ಮಟ್ಟದಲ್ಲಿ ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬಿದ ಈ ಸಂಧರ್ಭದಲ್ಲಿ 75 ಯೂನಿಟ್ಗಿಂತನೂ ಹೆಚ್ಚು ರಕ್ತವನ್ನು ದಾನ ಮಾಡಲಾಗುವುದು. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪಕ್ಷದ ಕಡೆಯಿಂದ ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದರು.
ಎಲ್ಲಾ ಮಂಡಲ ಮತ್ತು ಜಿಲ್ಲೆಯಲ್ಲಿ ಮೋದಿಜೀಯವರ ಜೀವನ ಕುರಿತಾದ ಸಾಕ್ಷ್ಯಚಿತ್ರ ಹಾಗೂ ಪ್ರದರ್ಶಿನಿಯನ್ನು ಸಾರ್ವಜನಿಕ ಸ್ಥಳಗಳಲ್ಲೂ ಕೂಡ ಏರ್ಪಡಿಸಲಾಗುವುದು. ಜಿಲ್ಲೆಯ ಆಯ್ದ ಭಾಗಗಳಲ್ಲಿ ಬೌದ್ಧಿಕ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುವುದು ಹಾಗೂ ಜಿಲ್ಲೆಯ ವಿಶೇಷ ಚೇತನರು, ದಿವ್ಯಾಂಗರು ಮತ್ತು ಗೌರವಾನ್ವಿತರಿಗೆ ಮೋದಿಯವರ ಕುರಿತಾದ ಆಯ್ದ ಪುಸ್ತಕಗಳನ್ನು ವಿತರಿಸುವ ಮೂಲಕ ಗೌರವ ಸಮರ್ಪಣೆ ಮಾಡಲಾಗುವುದು.
ವೋಕಲ್ ಫಾರ್ ಲೋಕಲ್ ಪ್ರಚಾರದ ಮೂಲಕ ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ಸಣ್ಣ ಸಣ್ಣ ಕೈಗಾರಿಕೆಗಳ ಉತ್ಪನ್ನಗಳನ್ನು ಪ್ರಚಾರ ಹಾಗೂ ಮಾರಾಟ ಮಾಡಿಸುವುದು. ವಿಶ್ವ ಕರ್ಮ ಯೋಜನೆಯಡಿಯಲ್ಲಿ ಕುಶಲಕರ್ಮಿಗಳು, ವೃತ್ತಿ ಪರರನ್ನು ಪ್ರೋತ್ಸಾಯಿಸುವುದು. ವಿಶೇಷವಾಗಿ ಮೋದಿ ವಿಕಾಸ್ ಮ್ಯಾರಥಾನ್, ವಿಕಸಿತ ಭಾರತ ಪರಿಕಲ್ಪನೆಯ ಚಿತ್ರ ಕಲಾ ಸ್ಪರ್ಧೆ ಹಾಗೂ ಸಂಸತ್ ಖೇಲ್ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಗಾಂಧಿ ಜಯಂತಿ, ಲಾಲ್ ಬಹುದ್ದೂರ್ ಶಾಸ್ರ್ತಿಯವರ ಜಯಂತಿಯಂದು ಖಾದಿ ಗ್ರಾಮೋದ್ಯೋಗವನ್ನು ಪ್ರೋತ್ಸಾಯಿಸುವ ಮೂಲಕ ಖಾದಿ ಬಟ್ಟೆಗಳನ್ನು ಖರೀದಿಸುವುದು ಮತ್ತು ಸ್ವದೇಶಿ ವಸ್ತುಗಳನ್ನು ಬಳಸಲು ಪ್ರೇರೇಪಿಸುವ ಮೂಲಕ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಿಲ್ಲೆಯಾದ್ಯಂತ ನಡೆಸಲಾಗುವುದು ಎಂದರು.
ಹಾಸನದದಲ್ಲಿ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಅನಾಹುತದಲ್ಲಿ ಮೃತಪಟ್ಟವರಿಗೆ ಜಿಲ್ಲಾ ಬಿಜೆಪಿ ಸಂತಾಪ ಸೂಚಿಸುತ್ತದೆ. ಘಟನೆಗೆ ಅಲ್ಲಿನ ಪೊಲೀಸ್ ವೈಫಲ್ಯವೇ ಕಾರಣವಾಗಿದೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ನಗರಾಧ್ಯಕ್ಷ ಸಂತೊಷ್ ಕೋಟ್ಯಾನ್, ಮುಖಂಡರುಗಳಾದ ರವೀಂದ್ರ ಬೆಳವಾಡಿ, ಚಮಿನ್ ಬೆಳಗೋಡು ಇದ್ದರು.



