ಕೊಟ್ಟಿಗೆಹಾರ ಬಳಿ ಚಾರ್ಮಾಡಿ ಘಾಟ್ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ದೇವನಗೂಲ್ ಗ್ರಾಮದ ಅಡ್ಡದಾರಿ ಇತ್ತೀಚೆಗೆ ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿತ್ತು. ರಾತ್ರಿ ವೇಳೆ ಸಂಶಯಾಸ್ಪದ ಸಾರಿಗೆ, ಕಾನೂನು ಉಲ್ಲಂಘನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಕಟ್ಟುನಿಟ್ಟಿನ ಹೆಜ್ಜೆ ಇಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ, ಬಣಕಲ್ ಠಾಣಾ ಪಿಎಸ್ಐ ರೇಣುಕಾ ನೇತೃತ್ವದ ತಂಡ ಹಾಗೂ ಪೊಲೀಸರು ಗ್ರಾಮಸ್ಥರ ಸಮ್ಮುಖದಲ್ಲಿ 12 ಅಡಿ ಉದ್ದದ ಬಲಿಷ್ಠ ಗೇಟ್ ಅಳವಡಿಸಿದರು. ಸುರಕ್ಷತೆಗಾಗಿ ರಸ್ತೆ ಎರಡೂ ಬದಿಗಳಲ್ಲಿ ಗುಂಡಿ ತೋಡಲಾಗಿದ್ದು, ರಾತ್ರಿ ವೇಳೆ ನಿಗಾವಹಿಸುವ ವ್ಯವಸ್ಥೆಯನ್ನೂ ಬಲಪಡಿಸಲಾಗಿದೆ.
ಕೊಟ್ಟಿಗೆಹಾರ ಚೆಕ್ ಪೋಸ್ಟ್ ಕಣ್ತಪ್ಪಿಸಿ ಹೋಗಲು ಈ ಒಳದಾರಿಯನ್ನು ಅಕ್ರಮ ಚಟುವಟಿಕೆ ನಡೆಸುವವರು ಬಳಸುತ್ತಿದ್ದರು. ಜಾನುವಾರ ಕಳ್ಳತನ ಸೇರಿದಂತೆ ವಿವಿಧ ರೀತಿಯ ಅಕ್ರಮ ಚಟುವಟಿಕೆಗಳಿಗೆ ಈ ರಸ್ತೆಯನ್ನು ಬಳಸಲಾಗುತ್ತಿತ್ತು.
ಹೊಸ ನಿಯಮದಂತೆ ಪ್ರತಿದಿನ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಈ ಮಾರ್ಗ ಸಂಪೂರ್ಣ ಬಂದ್ ಆಗಲಿದೆ. ಗೇಟ್ನ ಕೀಲಿಯನ್ನು ಕೊಟ್ಟಿಗೆಹಾರ ಚೆಕ್ಪೋಸ್ಟ್ ಸಿಬ್ಬಂದಿ ವಶದಲ್ಲಿರಿಸಿಕೊಂಡು ನಿರ್ವಹಣೆ ಕೈಗೊಳ್ಳಲಾಗುತ್ತಿದೆ.
ಎಸ್.ಪಿ. ವಿಕ್ರಂ ಅಮಟೆ ಹೇಳಿದಂತೆ ; “ಚಾರ್ಮಾಡಿ ಅಡ್ಡದಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳು ಈಗ ಇತಿಹಾಸ. ಗೇಟ್ ಅಳವಡಿಕೆ ಕೇವಲ ತಾತ್ಕಾಲಿಕ ಪರಿಹಾರವಲ್ಲ, ಜನರ ಸುರಕ್ಷತೆ ಹಾಗೂ ಶಾಂತಿಗಾಗಿ ದೀರ್ಘಕಾಲಿಕ ಹೆಜ್ಜೆ. ಗ್ರಾಮಸ್ಥರ ಸಹಕಾರವು ಈ ಕಾರ್ಯಕ್ಕೆ ಜೀವ ತುಂಬಿದೆ. ಪೊಲೀಸರು–ಜನತೆ ಕೈಜೋಡಿಸಿದರೆ ಯಾವುದೇ ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಈ ಕ್ರಮದಿಂದ ಅಕ್ರಮ ಸಾರಿಗೆ ಹಾಗೂ ಶಂಕಾಸ್ಪದ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂಬ ವಿಶ್ವಾಸವನ್ನು ಪೊಲೀಸರು ಮಾತ್ರವಲ್ಲ, ಗ್ರಾಮಸ್ಥರೂ ವ್ಯಕ್ತಪಡಿಸಿದ್ದಾರೆ. ಪೊಲೀಸರು–ಜನರ ಸಹಕಾರದ ಮಾದರಿ ಎಂಬ ಪ್ರಶಂಸೆ ಎಲ್ಲೆಡೆಯಿಂದ ಕೇಳಿಬರುತ್ತಿದೆ.



