ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗೆ ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಜಿಎಸ್ಟಿ ಪರಿಷ್ಕರಿಸಿ ದೇಶಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆಂದು ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಹೇಳಿದರು.
ಅವರು ಸೋಮವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದಿದ್ದ ಜಿಎಸ್ಟಿ ಶೇ.5, 12, 18, 28 ಇತ್ತು. ಇದನ್ನು ಪರಿಷ್ಕರಿಸಿ ಕೇವಲ ಶೇ.5 ಮತ್ತು 18 ಮಾತ್ರ ಉಳಿಸಲಾಗಿದೆ. ಇದರಿಂದ ದಿನ ನಿತ್ಯದ ಬಳಕೆ ವಸ್ತುಗಳ ಬೆಲೆ ಇಳಿಕೆಯಾಗುವ ಮೂಲಕ ದೇಶದ ಆರ್ಥಿಕತೆ ಮತ್ತು ಬಡವರ ಬದುಕನ್ನು ಸುಧಾರಿಸುವ ಮಹತ್ವದ ನಿರ್ಧಾರ ಕೈಗೊಂಡಿರುವ ಪ್ರಧಾನಿ ಮೋದಿ ಅವರಿಗೆ ಬಿಜೆಪಿ ತಾಲೂಕು ಘಟಕ ಶ್ಲಾಘಿಸುತ್ತದೆ ಎಂದು ಹೇಳಿದರು.
ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ.ರತನ್ ಮಾತನಾಡಿ, ಜಿಎಸ್ಟಿಯಿಂದ ಜನ ಸಾಮಾನ್ಯರ ಬದುಕು ಹೀನಾಯ ಸ್ಥಿತಿಗೆ ತಲುಪಿದೆ, ದಿನ ನಿತ್ಯದ ಬಳಕೆ ವಸ್ತು ಗಗನಕ್ಕೇರಿದೆ ಎಂದು ಬೊಬ್ಬೆ ಹೊಡೆದುಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ಜಿಎಸ್ಟಿ ಧರ ಇಳಿಕೆ ಮಾಡಿದಾಗ ವಿರೋಧ ಮಾಡುವ ಮೂಲಕ ಕೀಳು ಮಟ್ಟದ ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂದರು.
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ ರಾಜ್ಯ ಸರಕಾರಕ್ಕೆ ಸರಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ರಾಜ್ಯದೆಲ್ಲೆಡೆ ರಸ್ತೆಗಳೆಲ್ಲಾ ಹಾಳಾಗಿದೆ. ಬಿಜೆಪಿಯಿಂದ ಈ ಬಗ್ಗೆ ಸೆ.24ರಂದು ರಾಜ್ಯಾಧ್ಯಂತ 1 ಗಂಟೆ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದು, ಮೂಡಿಗೆರೆಯಲ್ಲಿಯೂ ಕೂಡ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಪ.ಪಂ. ಸದಸ್ಯ ಮನೋಜ್, ಮುಖಂಡರಾದ ದೀಪಕ್ ದೊಡ್ಡಯ್ಯ, ವಿನಯ್ ಹಳೆಕೋಟೆ, ಪ್ರಶಾಂತ್ ಬಿಳಗುಳ,ಸುನೀಲ್ ಮಣ್ಣಿಕೆರೆ, ತಾರೇಶ್, ಸುನೀಲ್ಕುಮಾರ್, ಪಟೇಲ್ ಮಂಜು, ರಂಗನಾಥ, ಲೋಕೇಶ್, ಸಂದೀಪ್ ಉಪಸ್ಥಿತರಿದ್ದರು.



