ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ 35ನೆಯ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವವನ್ನು ಚಿಕ್ಕಮಗಳೂರು ನಗರದ ಸುವರ್ಣಮಾಧ್ಯಮ ಭವನದಲ್ಲಿ ಜಂಗಮ ಬಳಗದ ವತಿಯಿಂದ ಸಂಭ್ರಮಿಸಲಾಯಿತು.
ಬೆಂಗಳೂರಿನ ವೀರಶೈವ ಅರ್ಚಕ ಪುರೋಹಿತ ಸಂಘದ ಮುಖಂಡ ವೇ.ಮೂ.ಮುಖೇಶ್ಶಾಸ್ತ್ರಿ ಪೂಜಾಕಾರ್ಯ ನೆರವೇರಿಸಿದರು.
ಶ್ರೀಪಾರ್ವತಿ ಮಹಿಳಾಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಮುಂದಾಳತ್ವದಲ್ಲಿ ಆಚಾರ್ಯಗೀತೆಗಳ ಗಾಯನ, ಭಜನೆ ನಡೆಯಿತು.
ಪ್ರಸ್ತುತ ರಂಭಾಪುರಿಪೀಠದ 121ನೆಯ ಜಗದ್ಗುರುಗಳಾಗಿ 34ವರ್ಷಗಳಿಂದ ವೀರಶೈವ ಸಂಸ್ಕøತಿ, ಸನಾತನ ಧರ್ಮ, ಪರಂಪರೆ, ಸಂರಕ್ಷಣೆಯ ಜೊತೆಗೆ ಪೂಜ್ಯ ಸೋಮೇಶ್ವರ ಜಗದ್ಗುರುಗಳು ಅಹರ್ನಿಶಿ ಶ್ರಮಿಸುತ್ತಿದ್ದಾರೆ.
ಬಾಳೆಹೊನ್ನೂರು ಪೀಠದ ಸರ್ವಾಂಗೀಣ ಏಳಿಗೆಗಾಗಿ ಪರಿಶ್ರಮಿಸುತ್ತಿದ್ದು ನಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಅವತರಿಸಿದ ಪವಿತ್ರಗ್ರಂಥ ‘ಸಿದ್ಧಾಂತ ಶಿಖಾಮಣಿ’ಯನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆಂದು ಜಂಗಮಬಳಗದ ಸಂಚಾಲಕ ವೇ.ಮೂ.ಪ್ರಭುಲಿಂಗಶಾಸ್ತ್ರಿ ನುಡಿದರು.
ವೇ.ಮೂ.ಕಾರ್ತೀಕಶಾಸ್ತ್ರಿ ನೇತೃತ್ವದಲ್ಲಿ ಸಿದ್ಧಾಂತ ಶಿಖಾಮಣಿಯ ಶ್ಲೋಕಗಳನ್ನು ಪಠಿಸಲಾಯಿತು. ಅಲಂಕೃತ ಶ್ರೀಜಗದ್ಗುರುಗಳವರ ಭಾವಚಿತ್ರಕ್ಕೆ ಕೊಟ್ರೇಶ್, ಬಸಯ್ಯ, ಸದಾಶಿವ, ಗಿರಿಜಮ್ಮ, ಗಾಯತ್ರಿ, ಅಂಬಿಕಾ, ಐಶ್ವರ್ಯ ಮತ್ತಿತರರು ಪುಷ್ಪನಮನ ಸಲ್ಲಿಸಿದರು.



