ಕುಷ್ಠರೋಗವು ದೀರ್ಘಕಾಲೀನ ಸೋಂಕಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ತೀವ್ರ ವಿರೂಪತ್ವ ಹಾಗೂ ಗಮನಾರ್ಹ ಅಂಗವೈಕಲ್ಯಕ್ಕೆ ಕಾರಣವಾಗಬಹುದು ಎಂದು ಚಿಕ್ಕಮಗಳೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ತಿಳಿಸಿದರು.
ಜನವರಿ 30 ರಿಂದ ಫೆಬ್ರವರಿ 13ರವರೆಗೆ ನಡೆಯುತ್ತಿರುವ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನದ ಪ್ರಯುಕ್ತ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಕೊ ಲೆಪ್ರೆ ಎಂಬ ಬ್ಯಾಕ್ಟೀರಿಯಾದಿಂದ ಬರುವ ಈ ಸೋಂಕು ತಗುಲಿದ ಸ್ಥಿತಿಯಲ್ಲಿ ಕೈಕಾಲುಗಳ ನರಗಳು, ಧರ್ಮ, ಮೂಗಿನ ಒಳಪದರ ಮತ್ತು ಮೇಲ್ಭಾಗದ ಶ್ವಾಸೇಂದ್ರೀಯ ಪ್ರದೇಶಗಳು ಹೆಚ್ಚು ಪೀಡನೆಗೆ ಒಳಗಾಗುತ್ತವೆ. ಚರ್ಮದ ಹುಣ್ಣುಗಳು, ನರಗಳ ಅವನತಿ ಮತ್ತು ಸ್ನಾಯು ದೌರ್ಬಲ್ಯ ಕುಷ್ಠರೋಗದ ಸಾಮಾನ್ಯ ಲಕ್ಷಣಗಳಾಗಿವೆ ಎಂದು ಅವರು ಮಾಹಿತಿ ನೀಡಿದರು.
ಕುಷ್ಠರೋಗವು ಸೋಂಕು ಹೊಂದಿರುವ ವ್ಯಕ್ತಿಯ ಸಂಪರ್ಕದಿಂದ ಹರಡುತ್ತದೆ. ಈ ರೋಗ ಹೊಂದಿರುವ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ ಹನಿಗಳ ಮೂಲಕ ಬ್ಯಾಕ್ಟೀರಿಯಾ ಹರಡಬಹುದು. ಇದು ದೀರ್ಘ ಕಾಲದವರೆಗೆ ಚಿಕಿತ್ಸೆ ಪಡೆಯದ ವ್ಯಕ್ತಿಯೊಂದಿಗೆ ನಿಕಟವಾಗಿ ಪುನರಾವರ್ತಿತ ಸಂಪರ್ಕ ಹೊಂದುವುದರಿಂದ ಸೋಂಕು ತಗಲುವ ಸಾಧÀ್ಯತೆ ಇರುತ್ತದೆ ಎಂದರು.
ರೋಗದ ಚಿಹ್ನೆಗಳು ಮತ್ತು ರೋಗ ಲಕ್ಷಣಗಳು ಕಂಡು ಬಂದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ ದೈಹಿಕ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಾಮಾನ್ಯವಾಗಿ 6 ತಿಂಗಳಿಂದ ಒಂದು ವರ್ಷದವರೆಗೆ ದೀರ್ಘಾವಧಿಯ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ದಿವ್ಯಶ್ರೀ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎನ್.ಬೇಬಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಂಜುನಾಥ್ ಮತ್ತು ಪಾಂಡುರಂಗ ಶಶಿಧರ್, ಗೀತಾ, ಹಿರಿಯ ಮತ್ತು ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾತಾಧಿಕಾರಿಗಳು ಮತ್ತು ಹಿರಿಯ ಮತ್ತು ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



