ಆಲ್ದೂರು ಸಮೀಪದ ಸತ್ತಿಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಟಿ ಆರ್, 1926ರಲ್ಲಿ ಬ್ರಿಟಿಷರ ಆಡಳಿತಾವಧಿಯಲ್ಲಿ ಪ್ರಾರಂಭವಾದ ಸರ್ಕಾರಿ ಶಾಲೆಯು ತನ್ನದೇ ಚರಿತ್ರೆಯನ್ನು ಇಂದು ಸೃಷ್ಟಿಸುವಂತೆ ಮಾಡಿದೆ.
ಸರ್ಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ ಖಾಸಗಿ ಶಾಲೆಗಳಲ್ಲಿ ಪೋಷಕರೇ ವಿದ್ಯಾರ್ಥಿಗಳಿಗೆ ಮನೆ ಕೆಲಸ ಇನ್ನಿತರ ಚಟುವಟಿಕೆಗಳನ್ನು ಕಲಿಸಬೇಕು ಮಾಡಿಸಬೇಕು ಆದರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಎಲ್ಲಾ ಚಟುವಟಿಕೆಗಳನ್ನು ಮಾಡಿಸುತ್ತಾರೆ ಸರ್ಕಾರಿ ಶಾಲೆಗಳ ಉಳಿವಿಗೆ ಸರ್ವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕಿ ನಯನ ಮೋಟಮ್ಮ ನಾನು ಕೂಡ ಶಿಕ್ಷಣ ಪ್ರೇಮಿಯಾಗಿದ್ದು, ಸಾಕಷ್ಟು ಸರ್ಕಾರಿ ಶಾಲೆಗಳ 50 75 ವರ್ಷದ ಕಾರ್ಯಕ್ರಮಗಳಿಗೆ ಭಾಗಿಯಾಗಿದ್ದೇನೆ ಆದರೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಶಾಲೆಯಲ್ಲಿ ಕಲಿತಂತಹ ವಿದ್ಯಾರ್ಥಿಗಳೆಲ್ಲರೂ ಸಮಾಜದಲ್ಲಿ ಸಾಧಕರಾಗಿ ಗುಣಮಟ್ಟದ ಜೀವನ ನಡೆಸುತ್ತಿರುವುದನ್ನು ಕಂಡು ಅತೀವ ಸಂತೋಷವಾಗಿದ್ದು, ಶಾಲೆಯ ಕಟ್ಟಡ ನಿರ್ಮಾಣಕ್ಕೆ ಭೂದಾನ ನೀಡಿದ ಭೂಧಾನಿಗಳ ಹೃದಯ ವೈಶಾಲ್ಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಕಷ್ಟು ಕೌಶಲ್ಯದಿಂದ ಕೂಡಿದ ಆಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣ ಖಾಸಗಿ ಶಾಲೆಗಳಲ್ಲಿ ಅತಿ ಹೆಚ್ಚು ದೊರೆಯುತ್ತಿರುವುದು ಎಲ್ಲರಿಗೂ ತಿಳಿದಿರುವಂತಹ ವಿಷಯ ಇಂತಹ ಖಾಸಗಿ ಶಾಲೆಗಳ ಮಟ್ಟಕ್ಕೆ ಗ್ರಾಮೀಣ ವಿದ್ಯಾರ್ಥಿಗಳನ್ನು ರೂಪಿಸುವ ಉದ್ದೇಶದಿಂದ ಸರ್ಕಾರ ಪ್ರತಿ ಒಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸುವ ಮಹತ್ವದ ಗುರಿಯನ್ನು ಇಟ್ಟುಕೊಂಡಿದೆ
ಈಗಾಗಲೇ ಕಳಸ ಹಂಗರವಳ್ಳಿ ಮತ್ತು ಮುತ್ತಿಗೆಪುರ ಸರ್ಕಾರಿ ಶಾಲೆಗಳು ಮಾದರಿಯಾಗಿದ್ದು, ಶಾಲೆ 2019 ರಲ್ಲಿ ಕಡಿಮೆ ದಾಖಲಾತಿ ಕಾರಣದಿಂದ ಮುಚ್ಚುವ ಸಂದರ್ಭ ತಲುಪಿದ್ದಾಗ ಶಿಕ್ಷಕಿ ವಾಯೀಜ್ ಉನ್ನಿಸಾ 25 ಸಾವಿರ ಹಣವನ್ನು ವ್ಯಯ ಮಾಡಿ ಪುನಃ ಮಕ್ಕಳನ್ನು ಬರುವಂತೆ ಮಾಡಿ ಶಾಲೆ ಪುನರಾರಂಭವಾಗಲು ಕಾರಣಿ ಭೂತರಾಗಿದ್ದು ಮುಖ್ಯ ಶಿಕ್ಷಕಿ ಹೇಮಾವತಿಯವರ ಶ್ರಮವನ್ನು ಶ್ಲಾಘಿಸಿದರು.

ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ನಿರ್ದೇಶಕರಾದ ಅಶೋಕ್ ಸೂರಪ್ಪನಹಳ್ಳಿ ಮಾತನಾಡಿ ಸತ್ತಿಹಳ್ಳಿ ಶಾಲೆಗೆ ಸುತ್ತಮುತ್ತಲಿನ 26 ಹಳ್ಳಿಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು ಮತ್ತು 1926ರಲ್ಲಿ ಶಾಲೆ ಪ್ರಾರಂಭವಾಗಿದ್ದು ಪ್ರಸ್ತುತ 2026 ವರ್ಷವಾಗಿದ್ದು 26 ಅಂಕೆಗಳು ವಿಶಿಷ್ಟ ಮಹತ್ವವನ್ನು ಪಡೆದಿವೆ.
ಜಿಲ್ಲೆಯಲ್ಲಿ 1332 ಶಾಲೆಗಳಿದ್ದು, ಅದರಲ್ಲಿ 69 ಶಾಲೆಗಳು ಪ್ರಸ್ತುತ ಮುಚ್ಚಲ್ಪಟ್ಟಿವೆ ಎನ್ನುವ ಮಾಹಿತಿ ಇದ್ದು, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಸರ್ಕಾರಿ ನೌಕರಿ ಎಂಬ ಕಾನೂನು ಜಾರಿಗೆ ತಂದರೆ ಮಾತ್ರ ಶಾಲೆಗಳು ಮುಚ್ಚಲ್ಪಡುವುದಿಲ್ಲ ಎಂದು ತಿಳಿಸಿದವರು ತಮ್ಮ ಶಾಲಾ ದಿನಗಳ ಹಳೆ ನೆನಪುಗಳನ್ನು ಹಂಚಿಕೊಂಡರು.

ಮುಖ್ಯ ಭಾಷಣ ಮಾಡಿದ ಸಾಹಿತಿ ಚಟ್ನಳ್ಳಿ ಮಹೇಶ್, ವಿದ್ಯಾರ್ಥಿಗಳ ಸಂಖ್ಯಾ ಅನುಪಾತಕ್ಕೆ ಅನುಗುಣವಾಗಿ ಪ್ರತಿಭಾನ್ವಿತ ಶಿಕ್ಷಕರನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರ ಹುದ್ದೆಗೆ ಆಯ್ಕೆ ಮಾಡುವುದಲ್ಲದೆ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾದ ಯೋಜನೆಗಳನ್ನು ಜಾರಿಗೆ ತರುತ್ತದೆ ಇದರ ಮೂಲ ಕಾರಣ ಸರ್ಕಾರಿ ಶಾಲೆಗಳಿಗೆ ನೀಡುವ ಪ್ರಾಧಾನ್ಯತೆ, ಮಕ್ಕಳ ಭವಿಷ್ಯ ರೂಪಿಸಲು ಗುರುಗಳ ಪಾತ್ರ ಮಹತ್ವವಾಗಿದ್ದು, ಗುರುಗಳು ಬ್ರಹ್ಮ ವಿಷ್ಣು ಮಹೇಶ್ವರ ತ್ರಿವಳಿ ಸಂಗಮಗಳ ಸಂಗಮವೇ ಆಗಿದ್ದಾರೆ ವಿದ್ಯಾರ್ಥಿಗಳಲ್ಲಿರುವ ಸೂಕ್ತ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ಹೊರ ತರುವ ಮುಖ್ಯ ವಾಹಿನಿ ಶಿಕ್ಷಕರಾಗಿದ್ದಾರೆ ಎಂದರು.
ಭೂದಾನ ನೀಡಿದ ಮಂಜೇಗೌಡ ಸಿದ್ದೇಗೌಡ ಬಿಆರ್ ಪರಮೇಶ್ ಬಿ ಆರ್ ಮೋಹನ್,ಸೆತ್ನಾ ರವರನ್ನು ಸ್ಮರಿಸಿ ಕುಟುಂಬದವರನ್ನು ಮತ್ತು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ್ ಕಾರೆಹಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ತಿಮ್ಮರಾಜು, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ,ಮಾಜಿ ಪಂಚಾಯಿತಿ ಅಧ್ಯಕ್ಷ ರಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್, ಹೋಬಳಿ ಅಧ್ಯಕ್ಷ ಕೆಳಗೂರು ಪೂರ್ಣೇಶ್, ಶಾಕಿರ್ ಹುಸೇನ್ ತೋಟದ ಮನೆ, ಸಂದೀಪ್ ಹರವಿನ ಗಂಡಿ, ಶಂಕರ್ ಸೂರಪ್ಪನಹಳ್ಳಿ, ನಿತ್ಯ ಯಲಗುಡಿಗೆ, ರಘು, ಚಂದ್ರಶೇಖರ್, ಚೇತನ್, ಸತೀಶ್, ದೇವರಾಜ್, ಮೂರ್ತಿ, ಇಂದ್ರೇಶ್, ಯೋಗೇಶ್, ಗೆಲ್ಲೇಶ್ ಅಶ್ವಥ್ , ಹೇಮಂತ್, ಹರೀಶ್, ಮಲ್ಲೇಶ್ ,ರವಿ, ಸುಜಿತ್ , ಧ್ರುವ ಕುಮಾರ್, ಗ್ರಾಮಸ್ಥರುಗಳು ಭಾಗವಹಿಸಿದ್ದರು.




