ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮದಲ್ಲಿ ಶ್ರೀಕಲ್ಲಾನಾಥೇಶ್ವರ ಸ್ವಾಮಿಯ ದಿವ್ಯ ರಥೋತ್ಸವವು ಮಂಗಳವಾರ ಸಂಜೆ ಸಂಭ್ರಮದಿಂದ ನಡೆಯಿತು.
ಭಾನುವಾರ ಮಹಾಶಿವರಾತ್ರಿ ರುದ್ರಾಭಿಷೇಕ, ನಿತ್ಯ ಪೂಜೆ, ಪುಣ್ಯ ವಾಚನ, ಗಣಪತಿ ಪೂಜೆ, ನಡೆಯಿತು. ಅಂಕುರ ಪೂಜೆ, ದ್ವಜ ರೋಹಣ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸೋಮವಾರ ಗಿರಿಜಾಕಲ್ಯಾಣ, ದೇವರ ರಥರೋಹಣ ನಡೆಯಿತು. ಮಂಗಳವಾರ ಭಕ್ತರು ಮಡಿಯಾಗಿ ಶ್ರೀಕಲ್ಲನಾಥೇಶ್ವರ ಸ್ವಾಮಿಗೆ ಹಣ್ಣು ಕಾಯಿ, ದಾನ್ಯ ಅರ್ಪಿಸಿದರು.
ಸಂಜೆ ಜಾತ್ರೆಯಲ್ಲಿ ಕಿಕ್ಕಿರಿದ ಜನ ಸಮೂಹದ ನಡುವೆ ಭಕ್ತರು ದೇವಸ್ಥಾನದ ಹೆಬ್ಬಾಗಿಲ ತನಕ ರಥ ಎಳೆದು ಸಂಭ್ರಮಿಸಿದರು. ಜಾತ್ರೆಯಲ್ಲಿ ಸುತ್ತಾಡಿ ಮಕ್ಕಳು ತಿಂಡಿ ತಿನಿಸು ಆಟಿಕೆಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು.
ಸಂಜೆ ರಥೋತ್ಸವದಲ್ಲಿ ಬಣಕಲ್, ಕೂಡಹಳ್ಳಿ, ಕೊಟ್ಟಿಗೆಹಾರ, ತರುವೆ, ದೇವನಗೂಲ್, ಬಾಳೂರು, ಫಲ್ಗುಣಿ, ಚೇಗು, ಕೋಗಿಲೆ ಮತ್ತಿತರ ಗ್ರಾಮದ ಗ್ರಾಮಸ್ಥರು ಸೇರಿ ಸಂಭ್ರಮದ ರಥೋತ್ಸವ ಹಾಗೂ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ಕೃಫೆಗೆ ಪಾತ್ರರಾದರು.
ತಾಲ್ಲೂಕಿನ ಗಣ್ಯರು ಜಾತ್ರೆಯಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು. ಬುಧವಾರದಂದು ಅವಭೃತ ಸ್ನಾನ(ನೀರೋಕಳಿ) ನಡೆದು ಸಂಭ್ರಮದ ಜಾತ್ರೆಗೆ ತೆರೆ ಎಳೆಯಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಬಿ.ಎಸ್.ದಿವ್ಯ ಪ್ರಸಾದ್, ಕಾರ್ಯದರ್ಶಿ ಬಿ.ಆರ್.ಅಭಿಲಾಷ್, ಗೌರವ ಕಾರ್ಯದರ್ಶಿ ಬಿ.ಸಿ.ಪ್ರವೀಣ್ ಹಾಗೂ ಸಮಿತಿಯ ಸದಸ್ಯರು, ಗ್ರಾಮಸ್ಥರು ಇದ್ದರು.



