ಲೇಖಕರಾದ ಡಾ.ಪ್ರದೀಪ್ ಕೆಂಜಿಗೆ ಅವರ ‘ನರವಾನರ’ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯಿಂದ ಕೊಡಮಾಡುವ ಅತ್ಯುತ್ತಮ ಪುಸ್ತಕ ಪ್ರಶಸ್ತಿ ದೊರೆತಿದೆ.
2024ರಲ್ಲಿ ಪ್ರಕಟವಾದ ವಿವಿಧ 17 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಆಯ್ಕೆ ಮಾಡಲಾಗಿದ್ದು ಸಂಕೀರ್ಣ ಪ್ರಕಾರದಲ್ಲಿ ಡಾ.ಪ್ರದೀಪ್ ಕೆಂಜಿಗೆ ಅವರ ನರವಾನರ ಕೃತಿಗೆ ಅತ್ಯುತ್ತಮ ಪುಸ್ತಕ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ 25 ಸಾವಿರ ನಗದು ಬಹುಮಾನ, ಫಲಕ ಪ್ರಮಾಣ ಪತ್ರವನ್ನು ಒಳಗೊಂಡಿದೆ.
‘ನರವಾನರ’ ಕೃತಿ ಚಿಂಪಾಂಜಿಗಳ ನಡವಳಿಕೆ, ಜೀವನವಿಧಾನ ಮುಂತಾದವುಗಳನ್ನು ವಿಶ್ಲೇಷಿಸುವ ವೈಜ್ಞಾನಿಕ ಕೃತಿಯಾಗಿದ್ದು ಜೀವ ವಿಜ್ಞಾನದ ಸಂಶೋಧನೆಗಳನ್ನು, ಹಲವಾರು ವಿಸ್ಮಯಕಾರಿ ಸಂಗತಿಗಳನ್ನು ಮನಮುಟ್ಟುವಂತೇ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಡಾ.ಪ್ರದೀಪ್ ಕೆಂಜಿಗೆ ಅವರು ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ ಗ್ರಾಮದವರು. ಕಾಫಿ ಕೃಷಿಯ ಜೊತೆಗೆ ಸಾಹಿತ್ಯ ಕೃತಿಗಳ ರಚನೆಯಿಂದ ಗುರುತಿಸಿಕೊಂಡಿದ್ದಾರೆ.
ಪ್ರದೀಪ್ ಅವರು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಒಡನಾಡಿಯಾಗಿದ್ದರು. ತೇಜಸ್ವಿ ಅವರೊಡನೆ ಪ್ಯಾಪಿಲಾನ್ 1. 2, ವಿಸ್ಮಯ 1 2 3 ಕೃತಿಗಳನ್ನು ರಚಿಸಿದ್ದು ಪ್ಯಾಪಿಯೋನ್ 3, ಬರ್ಮುಡಾ ಟ್ರಯಾಂಗಲ್, ಅದ್ಭುತಯಾನ, ಹೆಬ್ಬಾವಿನೊಡನೆ ಹೋರಾಟ ಕೃತಿಯನ್ನು ಸಹ ಪ್ರಕಟಿಸಿದ್ದಾರೆ.
ಓದುಗರ ಕುತೂಹಲ ತಣಿಸುವ ಅನೇಕ ವೈಜ್ಞಾನಿಕ ವಿಚಾರಗಳನ್ನು, ಪ್ರಕೃತಿ ವಿಸ್ಮಯಗಳನ್ನು ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರದೀಪ್ ಅವರ ತಿಳಿಹಾಸ್ಯಮಿಶ್ರಿತ ನವೀರಾದ ಬರವಣಿಗೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಅದರ ಮೇಲೆ ಕ್ರಿಮಿನಾಶಕಗಳ ದುಷ್ಪರಿಣಾಮಗಳ ಅಧ್ಯಯನದಲ್ಲಿ ಪಿಎಚ್ಡಿ ಪಡೆದಿದ್ದಾರೆ. ಕೆಫೆ ಕಾಫಿ ಡೇಯಲ್ಲಿ ಸಂಶೋಧನಾ ಮತ್ತು ಅಭಿವೃದ್ದಿ ವಿಭಾಗದ ಮುಖ್ಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ.



