ಕಾಡುಕೋಣ ದಾಳಿಗೆ ಮಹಿಳೆಯೊಬ್ಬರು ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಿರೇಬೈಲ್ ಬಿಳಗಲಿ ಗ್ರಾಮದ ಬಳಿ ನಡೆದಿದೆ.
ಶೀಲಾ (52) ಮೃತ ದುರ್ದೈವಿ. ತನ್ನದೇ ತೋಟದಲ್ಲಿ ಶೀಲಾ ಕೆಲಸ ಮಾಡುತ್ತಿದ್ದ ವೇಳೆ, ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಮಹಿಳೆಯ ಹೊಟ್ಟೆ ಹಾಗೂ ಕತ್ತಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗಮಧ್ಯೆಯೇ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ.
ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶೀಲಾ ಅವರು ಪತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಘಟನೆಯಿಂದ ಕಳಸ ಭಾಗದಲ್ಲಿ ರೈತರ ಸಹನೆಯ ಕಟ್ಟೆಯೊಡೆದಿದ್ದು ಕಳಸ ಆಸ್ಪತ್ರೆ ಎದುರು ನೂರಾರು ಜನರು ಜಮಾಯಿಸಿ, ಅರಣ್ಯ ಇಲಾಖೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು
ಕಾಡುಕೋಣಗಳ ಹಾವಳಿಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವಂತೆ ರೈತರು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ಪರಿಹಾರ ಮರೀಚಿಕೆಯಾಗಿದೆ.


