ಕಂದಾಯ ಇಲಾಖೆಯೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಕಾರ್ಯ ನಡೆಸಿ ನಿವೇಶನ ರಹಿತರಿಗೆ ಭೂಮಿ ಹಂಚಿಕೆ ಮಾಡಿಕೊಡಬೇಕೆಂದು ಒತ್ತಾಯಿಸಿ ಶುಕ್ರವಾರ ತರುವೆ ಗ್ರಾಮದ ನಿವೇಶನ ರಹಿತರು ಪಟ್ಟಣದ ಅರಣ್ಯ ಇಲಾಖೆಗೆ ಆಗಮಿಸಿ ಡಿಸಿಎಫ್ ಬೋರಯ್ಯ ಅವರಿಗೆ ಮನವಿ ಸಲ್ಲಿಸಿದರು.
ತರುವೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆಗಾಗಿ ಸರ್ವೇ ನಂಬರ್ 104 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಮತ್ತು ಪ್ರವಾಸೋಧ್ಯಮ ಇಲಾಖೆ ಜಾಗದ ಹತ್ತಿರ ಕಂದಾಯ ಮತ್ತು ಅರಣ್ಯ ಇಲಾಖೆಗೆ ಸಂಬಂಧ ಪಟ್ಟ ಜಾಗವು ಖಾಲಿ ಇದೆ. ಅದನ್ನು ನಿವೇಶನ ರಹಿತರಿಗೆ ಮತ್ತು ಸರಕಾರಿ ಕಟ್ಟಡಗಳ ನೀಡಬೇಕೆಂದು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಜಾಗವನ್ನು ಉಳ್ಳವರ ಪಾಲಿಗೆ ಹೋಗದಂತೆ ತಡೆ ಹಿಡಿದು, ಸ್ಥಳೀಯ ಗ್ರಾ.ಪಂ. ಸುಪರ್ಧಿಗೆ ವಹಿಸಬೇಕು. ಅಲ್ಲದೇ ಸರ್ವೇ ನಂಬರ್ 106 ರಲ್ಲಿ ನಿವೇಶನಕ್ಕಾಗಿ 4ಎಕರೆ ಜಮೀನು ಕಾಯ್ದಿರಿಸಲಾಗಿದ್ದು, ಆ ಜಾಗದಲ್ಲಿ ಮರಗಳಿರುವುದರಿಂದ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲದ ಕಾರಣ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೂಡಲೇ ಕಂದಾಯ ಮತ್ತು ಅರಣ್ಯ ಇಲಾಖೆ ಚಂಟಿ ಸರ್ವೆ ನಡೆಸಿ ನಿವೇಶನ ರಹಿತರ ನೆರವಿಗೆ ಬರಬೇಕೆಂದು ನಿವೇಶನ ರಹಿತರು ಮನವಿ ಮಾಡಿದರು.
ತರುವೆ ಗ್ರಾಮಸ್ಥರಾದ ಪೂರ್ಣಿಮಾ, ಸರಿನಾ, ಕೃಷ್ಣಮೂರ್ತಿ, ಮಹೇಶ್, ಫಾತೀಮಾ, ಲಕ್ಷ್ಮಿ, ವಿನಂತಿ, ಕಮಲ, ಗೀತ, ಕವಿತ, ಲತಾ, ಸನಾವುಲ್ಲಾ, ಪಾರ್ವತಿ, ರೇಖಾ ಸುಜಾತ ಮತ್ತಿತರರಿದ್ದರು.


