ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿಗಳ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದ್ದು ಇದೀಗ ಪ್ರಬಲ ಆಕಾಂಕ್ಷಿಯಾಗಿ ಎಂ.ಎಸ್.ಸುಜಿತ್ ಕುಮಾರ್ ಹಳೇಮೂಡಿಗೆರೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ತಾನು ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿ ಎಸ್ಸೀ ಮೋರ್ಚಾದ ತಾಲೂಕು ಅಧ್ಯಕ್ಷ ಎಂ.ಎಸ್.ಸುಜಿತ್ಕುಮಾರ್ ಹಕ್ಕು ಮಂಡಿಸಿದ್ದಾರೆ.
ಅವರು ಸೋಮವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾನು ಬಿಜೆಪಿ ಪಕ್ಷದಲ್ಲಿ ಕಳೆದ 20 ವರ್ಷದಿಂದ ಸಕ್ರೀಯ ಕಾರ್ಯಕರ್ತನಾಗಿ ದುಡಿದಿದ್ದೇನೆ. ತಾನು ಪಕ್ಷದಲ್ಲಿ ಬೂತ್ ಕಮಿಟಿ ಅಧ್ಯಕ್ಷನಾಗಿ, ಹೋಬಳಿ ಎಸ್ಸೀ ಮೋರ್ಚಾದ ಕಾರ್ಯದರ್ಶಿಯಾಗಿ, ಪ್ರಸ್ತುತ ಎಸ್ಸೀ ಮೋರ್ಚಾದ ತಾಲೂಕು ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
ತನ್ನ ತಂದೆ ಕೂಡ ಹಿಂದಿನಿಂದಲೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಗ್ರಾ.ಪಂ. ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ತಾನು ಎಸ್ಸೀ ಮೋರ್ಚಾದ ಸಂಘಟನೆಗಾಗಿ ಮೂಡಿಗೆರೆ ಕ್ಷೇತ್ರದಾದ್ಯಂತ ಪ್ರವಾಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಬಹಳಷ್ಟು ಜನಸಾಮಾನ್ಯರು ನನಗೆ ಚಿರಪರಿಚಿತರು. ನನಗೆ ಅಪಾರ ಸ್ನೇಹಿತರ ಬಳಗವಿದೆ. ಅಲ್ಲದೇ ಕ್ಷೇತ್ರದಲ್ಲಿ ಅತೀಹೆಚ್ಚು ಮತ ಇರುವ ಬಲಗೈ ಸಮುದಾಯದ ಛಲವಾದಿ ಸಮೂಹದವನಾಗಿದ್ದೇನೆಂದು ಹೇಳಿದರು.
ಮೂಡಿಗೆರೆ ಕ್ಷೇತ್ರದಲ್ಲಿ ಹಣದ ಸಂಪನ್ಮೂಲ ಬೇಕಾಗಿಲ್ಲ. ಸಾಮಾನ್ಯ ಕಾರ್ಯಕರ್ತನೂ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಬಹುದು. ತನಗೆ ಒಂದು ಅವಕಾಶ ನೀಡಿದರೆ, ಈ ಭಾಗದ ರೈತರ, ಜನಸಾಮಾನ್ಯರ ಕಷ್ಟ ಸೇರಿದಂತೆ ಜ್ವಲಂತ ಸಮಸ್ಯೆಗಳನ್ನು ನಿವಾರಿಸಲು ಶ್ರಮ ವಹಿಸುತ್ತೇನೆ. ಹಾಗಾಗಿ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಒಂದು ಅವಕಾಶ ನೀಡಬೇಕೆಂದು ಪಕ್ಷದ ತಾಲೂಕು ಹಾಗೂ ಜಿಲ್ಲಾಧ್ಯಕ್ಷರಿಗೆ ಮನವಿ ಮಾಡಿದ್ದೇನೆಂದು ತಿಳಿಸಿದರು.
ಸುಜಿತ್ ಎಂಟ್ರಿ ಮೂಲಕ ಮೂಡಿಗೆರೆ ಕ್ಷೇತ್ರದಲ್ಲಿ ಬಿ.ಜೆ.ಪಿ. ಆಕಾಂಕ್ಷಿಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಕ್ಷೇತ್ರದ ಹೊರಗಿನ ಅಭ್ಯರ್ಥಿಗಳು ಬಂದು ಇಲ್ಲಿ ಆಕಾಂಕ್ಷಿಗಳು ಎಂದು ಓಡಾಟ ಪ್ರಾರಂಭಿಸಿದ ಮೇಲೆ ಈಗ ಸ್ಥಳೀಯ ಮುಖಂಡರು ತಮ್ಮ ಅಹವಾಲು ಸಲ್ಲಿಸಲು ಪ್ರಾರಂಭಿಸಿದ್ದಾರೆ.



