ಮೂಡಿಗೆರೆ ತಾಲ್ಲೂಕಿನ ಗಬ್ಗಲ್ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕಿ ಶ್ರೀಮತಿ ಶಶಿಕಲಾ ಅವರಿಗೆ ಈ ಸಾಲಿನ ಪ್ರೌಢಶಾಲಾ ಮಟ್ಟದ ಚಿಕ್ಕಮಗಳೂರು ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರಕಿದೆ.
ಸೆಪ್ಟಂಬರ್ 5ರಂದು ಶೃಂಗೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಶಾಸಕ ರಾಜೇಗೌಡ ಇವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಶಶಿಕಲಾ ಇವರು ಕಳೆದ 25 ವರ್ಷಗಳಿಂದ ಪ್ರೌಢಶಾಲೆ ಗಣತಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಕಲೇಶಪುರ ಉಚ್ಚಂಗಿ ಸರ್ಕಾರಿ ಪ್ರೌಢಶಾಲೆಯಲ್ಲಿ 4 ವರ್ಷ, ಮೂಡಿಗೆರೆ ತಾಲ್ಲೂಕಿನ ಕುಂದೂರು ಸರ್ಕಾರಿ ಪ್ರೌಢಶಾಲೆಯಲ್ಲಿ 4 ವರ್ಷ ಸೇವೆ ಸಲ್ಲಿಸಿ ಇದೀಗ ಗಬ್ಗಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ 8 ವರ್ಷಗಳಿಂದ ಸತತವಾಗಿ ಶೇಕಡಾ ನೂರರಷ್ಟು ಫಲಿತಾಂಶವನ್ನು ಗಣಿತ ವಿಷಯದಲ್ಲಿ ತಂದ ಹೆಗ್ಗಳಿಕೆ ಪಡೆದಿದ್ದಾರೆ. ಶಾಲೆಯಲ್ಲಿ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿಯೂ ಇವರು ಸದಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರು ಶಾಲೆಯ ಅನೇಕ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ.
ಇವರ ಸೇವಾ ಮನೋಭಾವನೆ, ಕರ್ತವ್ಯನಿಷ್ಠೆ ಮತ್ತು ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಈ ಸಾಲಿನ ಪ್ರೌಢಶಾಲಾ ಮಟ್ಟದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶ್ರೀಮತಿ ಶಶಿಕಲಾ ಸಾರಗೋಡು ಗ್ರಾಮದ ಕಾಫಿ ಬೆಳೆಗಾರ ಉಮೇಶ್ ಗೌಡ ಅವರ ಪತ್ನಿ.



