ಕೊಟ್ಟಿಗೆಹಾರದ ಸೀತಾರಾಮ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಕೊನೆಯ ದಿನ ಸಂಭ್ರಮದ ನಗರ ಭಜನೆ ನಡೆಯಿತು.ವಿಶೇಷ ರಂಗೋಲಿ ಜನರ ಗಮನ ಸೆಳೆಯಿತು.

ಸಂಜೆ ಮಳೆಯ ನಡುವೆಯೂ ಭಕ್ತರು ನಗರ ಭಜನೆ ನಡೆಸಿದರು.ಭಜನಾ ಕುಣಿತ,ಕೊಟ್ಟಿಗೆಹಾರದ ರಾಜಬೀದಿಯಲ್ಲಿ ಡೊಳ್ಳು ಕುಣಿತ ಜೊತೆಗೆ ಭಕ್ತರು ಮೆರವಣಿಗೆ ನಡೆಸಿದರು.ರಸ್ತೆಯಲ್ಲಿ ಆಕರ್ಷಕ ನೃತ್ಯ ಮನಸೂರೆಗೊಂಡಿತು. ಬಳಿಕ ಅತ್ತಿಗೆರೆಯ ದೇವಸ್ಥಾನ ತನಕ ಮೆರವಣಿಗೆ ಸಾಗಿ ಸೋಮೇಶ್ವರ ದರ್ಶನ ಪಡೆದರು.ಸಂಜೆ ಕೆಲ್ಲೂರು ಕೊಲ್ಲಿ ಭಜನಾ ಮಂಡಳಿಯಿಂದ ಭಜನ ಕುಣಿತ,ನಿಸಾನಿ ಮೇಳದೊಂದಿಗೆ ದೇವಸ್ಥಾನಕ್ಕೆ ತೆರಳಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ,ಲಘು ಉಪಾಹಾರದೊಂದಿಗೆ ನವರಾತ್ರಿ ಉತ್ಸವಕ್ಕೆ ಅಂತಿಮ ತೆರೆ ಎಳೆಯಲಾಯಿತು.
ಬಣಕಲ್ ನಲ್ಲಿ ಇದೇ ಮೊದಲ ಬಾರಿಗೆ ದಸರಾ ಉತ್ಸವ ನಡೆಸಲಾಯಿತು.ಶ್ರೀಮಹಾಮ್ಮಾಯಿ ದೇವಸ್ಥಾನದಲ್ಲಿ ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶಾರದಾ ಮೂರ್ತಿಯನ್ನು ಶನಿವಾರ ನವರಾತ್ರಿ ಉತ್ಸವದ ಕೊನೆಯ ದಿನದಂದು ವಿವಿಧ ವಾದ್ಯ ತಂಡಗಳ ಜೊತೆಗೆ ಕುಣಿತ ಭಜನೆಯೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು.


