ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಮತ್ತು ರಾಜ್ಯ ಸರ್ಕಾರ ಆಡಳಿತಾತ್ಮಕವಾಗಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ರಾಜ್ಯದಲ್ಲಿ ನಡೆದ ಸಾಲು-ಸಾಲು ದರೋಡೆ ಪ್ರಕರಣಗಳ ನಡೆಯುತ್ತಿವೆ, ಪೊಲೀಸರನ್ನು ಯಕ್ಷಗಾನ ತಡೆಯುವುದಕ್ಕೆ ನಿಯೋಜನೆ ಮಾಡುವುದು ಬೇಡ. ಸಿ.ಟಿ ರವಿ ಅವರನ್ನು ಪೊಲೀಸರ ಮೂಲಕ ಊರೆಲ್ಲಾ ತಿರುಗಿಸಿ ಏನೋ ಸಾಧನೆ ಮಾಡಿದ್ದೇವೆ ಎಂಬ ಭ್ರಮೆ ಬೇಡ ಮೊದಲು ದರೋಡೆಕೋರರು, ಅತ್ಯಾಚಾರಿಗಳನ್ನು ಹೆಡೆಮುರಿಕಟ್ಟಲಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ದಿನನಿತ್ಯ ದರೋಡೆ, ಕೊಲೆ, ಅತ್ಯಾಚಾರ, ಗೋವುಗಳ ಮಾರಣಹೋಮ ನಡೆಯುತ್ತಿದೆ. ಗೃಹ ಇಲಾಖೆ ಸಂಪೂರ್ಣ ನಿಷ್ಕ್ರೀಯವಾಗಿದೆ ಎಂದು ಆರೋಪಿಸಿದ್ದಾರೆ.
ವಿರೋಧ ಪಕ್ಷದಲ್ಲಿ ಆಂತರಿಕ ಕಚ್ಚಾಟ ಇದ್ರೆ ಪಕ್ಷದ ಮೇಲೆ ಮಾತ್ರ ಪರಿಣಾಮ ಬೀರುತ್ತೆ. ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟ ಇರಬಾರದು. ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟ ಜೋರಾದ್ರೆ ಜನರಿಗೆ ತೊಂದರೆ ಆಗುತ್ತದೆ ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ಒಂದು ಕಡೆ ಟಗರು ಮತ್ತೊಂದು ಕಡೆ ಬಂಡೆ ಗುದ್ದಾಡ್ತಾ ಇದ್ರೆ ಜನರಿಗೆ ತೊಂದರೆ ಆಗುತ್ತೆ. ಬಿಜೆಪಿ ಪಕ್ಷದಲ್ಲಿನ ಆಂತರಿಕ ಕಲಹದ ಬಗ್ಗೆ ಇಂದು ಅಥವಾ ನಾಳೆ ಎಲ್ಲವೂ ಕೂಡ ಸರಿ ಹೋಗಲಿದೆ ಎಂದು ಹೇಳಿದ್ದಾರೆ.


