ಆನೆ ದಾಳಿಗೆ ಕಾಫಿನಾಡಲ್ಲಿ ಮತ್ತೊಂದು ಬಲಿಯಾಗಿದೆ.
4 ದಿನದ ಅಂತರದಲ್ಲಿ 2ನೇ ಸಾವು ಸಂಭವಿಸಿದೆ.
ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದ ಬಳಿ ಭಾನುವಾರ ರಾತ್ರಿ ಕಾಡಾನೆ ದಾಳಿಯಿಂದ ಕಾಫಿ ಬೆಳೆಗಾರರೊಬ್ಬರು ಕೊನೆಯುಸಿರೆಳೆದಿದ್ದಾರೆ.
ಅಂಡವಾನೆ ಗ್ರಾಮದ ಸುಬ್ರಾಯಗೌಡ (65) ಮೃತ ದುರ್ದೈವಿ. ಭಾನುವಾರ ರಾತ್ರಿ ಮನೆಯ ಸಮೀಪವೆ ಬಂದಿರುವ ಆನೆ ಸುಬ್ರಾಯಗೌಡರ ಮೇಲೆ ಏಕಾಏಕಿ ದಾಳಿ ನಡೆಸಿದ್ದು ಆನೆ ದಾಳಿಯಿಂದ ಸುಬ್ರಾಯಗೌಡರು ತೀವ್ರ ಗಾಯಗೊಂಡು ಕೊನೆ ಉಸಿರುಳಿದ್ದಾರೆ.
ನಾಲ್ಕು ದಿನದ ಹಿಂದಷ್ಟೇ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮದಲ್ಲಿ 25 ವರ್ಷದ ಕಾರ್ಮಿಕ ಮಹಿಳೆ ಆನೆ ದಾಳಿಯಿಂದ ಸಾವನ್ನಪ್ಪಿದ್ದಳು
4 ದಿನ ಕಳೆಯುವಷ್ಟರಲ್ಲಿ ಭಾನುವಾರ ಮತ್ತೊಂದು ಜೀವ ಆನೆ ದಾಳಿಗೆ ಬಲಿಯಾಗಿದೆ. ಮೃತ ಸುಬ್ರಾಯ ಗೌಡರು ಸಣ್ಣ ಕಾಫಿ ಬೆಳೆಗಾರರಾಗಿದ್ದರು. ಮೃತರು ಪತ್ನಿ ಹಾಗೂ ಪರ ಮಕ್ಕಳನ್ನು ಅಗಲಿದ್ದಾರೆ.
ಘಟನೆಯಿಂದ ರೊಚ್ಚಿಗೆದ್ದ ಜನತೆ ರಾತ್ರೋರಾತ್ರಿ ಬಾಳೆಹೊನ್ನೂರು ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಇಂದು ಸೋಮವಾರ ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸಂಪೂರ್ಣ ಕಾಂಡೆ ಹೋಬಳಿ ಖಾಂಡ್ಯ ಹೋಬಳಿ ಬಂದ್ಗೆ ಕರೆ ನೀಡಲಾಗಿದೆ. ಬಂದ್ ಕರೆಗೆ ವಿವಿಧ ರಾಜಕೀಯ ಪಕ್ಷಗಳು ಮತ್ತು ರೈತ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಮಲೆನಾಡಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿಯಿಂದ ಜನರು ಹೈರಾಣಾಗಿದ್ದಾರೆ.
ಮೂಡಿಗೆರೆ-ಬೇಲೂರು ಗಡಿ ಭಾಗದ ಚೀಕನಹಳ್ಳಿ ಗ್ರಾಮದಲ್ಲಿ 25 ಆನೆಗಳು ಕಾಣಿಸಿಕೊಂಡಿದ್ವು, ಮೇಲಿಂದ ಮೇಲೆ ಆನೆ ದಾಳಿ ಪ್ರಕರಣ ಕಂಡು ಮಲೆನಾಡಿಗರು ಕಂಗಾಲಾಗಿದ್ದಾರೆ.
ಎರಡು ಕಾಡಾನೆಗಳನ್ನು ಹಿಡಿಯಲು ಆದೇಶ
ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಹೋಬಳಿ ವ್ಯಾಪ್ತಿಯ ಹುಯಿಗೇರೆ, ದೇವದಾನ, ಅಂಡವಾನಿ, ಬನ್ನೂರು ಕಸ್ಕೆಮನೆ ನೇಮನಹಳ್ಳಿ, ಹಲಸೂರು , ಸುತ್ತಮುತ್ತ ಪ್ರದೇಶಗಳಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದು ಇದರಿಂದ ಐದು ದಿನಗಳ ಅಂತರದಲ್ಲಿ ಶ್ರೀಮತಿ ಅನಿತಾ ಮತ್ತು ಶ್ರೀ ಸುಬ್ರಾಯ ಗೌಡ ರವರು ಕಾಡಾನೆಗಳ ದಾಳಿಯಿಂದ ಮೃತಪಟ್ಟಿರುತ್ತಾರೆ. ಆದ್ದರಿಂದ ಮಾನ್ಯ ಅರಣ್ಯ ಸಚಿವರು ಮೇಲ್ಕಂಡವರ ಸಾವಿಗೆ ಕಾರಣವಾದ ಎರಡು ಪುಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ನಿರ್ದೇಶನ ನೀಡಿದ್ದು ,ಅದರಂತೆ ಸಕ್ರೆಬೈಲು ಆನೆ ಬಿಡಾರದಿಂದ ಕುಮ್ಕಿಆನೆಗಳನ್ನು ಕರೆತಂದು ಮೇಲ್ಕಂಡ ಎರಡು ಪುಂಡನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ನಾಳೆಯಿಂದ ಪ್ರಾರಂಭಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.



