ಈ ಸಮಾಜದಲ್ಲಿ ಎಲ್ಲಾ ಸಮುದಾಯದ ಜನರು ಸ್ವಾತಂತ್ರ್ಯವಾಗಿ ಬದುಕಬೇಕುವಂತಹ ವಾತಾವರಣ ನಿರ್ಮಾಣವಾಗಬೇಕು. ಇದಕ್ಕೆ ದಕ್ಕೆಯಾಗದಂತೆ ಯಾರೂ ನಡೆದುಕೊಳ್ಳಬಾರದೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಥಾ ರಾಜ ತಥಾ ಪ್ರಜೆಗಳೆಂಬಂತೆ ತಾನು ರಾಜನೂ ಅಲ್ಲ, ರಾಣಿಯೂ ಅಲ್ಲ. ತಾನು ಶಾಸಕಿಯಾಗಿ ಎಲ್ಲಾ ಸಮುದಾಯದವರನ್ನು ಒಂದೇ ರೀತಿಯಲ್ಲಿ ಕಾಣುತ್ತಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುತ್ತಿಲ್ಲ. ಪ್ರತಿಯೊಬ್ಬರಿಗೂ ಅವರವರ ಧರ್ಮದ ಆಚರಣೆ, ವೇಷ ಭೂಷಣ ತೊಡುಗೆಯಲ್ಲಿ ಸ್ವಾತಂತ್ರ್ಯವಿದೆ. ಇದಕ್ಕೂ ವಿರೋಧ ಹಾಗೂ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ತಾನು ಶಾಸಕರಾದ ಬಳಿಕ ವಿಭಿನ್ನವಾಗಿ ಆಡಳಿತ ನಡೆಸುತ್ತಿದ್ದೇನೆ. ಯಾವುದೇ ಖಾಲಿ ಪತ್ರಗಳಿಗೆ ಸಹಿ ಹಾಕಿಲ್ಲ. ಪ್ರಭಾವಿಗಳ ಮನೆಗೆ ರಸ್ತೆ ಮಾಡಿಕೊಟ್ಟಿಲ್ಲ. ಬದಲಾಗಿ ಜನಸಾಮಾನ್ಯರಿರುವ ಪ್ರದೇಶಕ್ಕೆ ಅನುದಾನವಿಟ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಅಲ್ಲದೇ ತಾಲೂಕಿನಲ್ಲಿ ಯಾವುದೇ ಪ್ರಚೋಧನಕಾರಿ ಭಾಷಣ ಹಾಗೂ ಕೋಮುಗಲಭೆಗಳಿಗೆ ಅವಕಾಶ ನೀಡದಂತೆ ನಿಗಾ ವಹಿಸಿದ್ದರಿಂದ ಕ್ಷೇತ್ರದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗಿದೆ. ಕ್ಷೇತ್ರದಲ್ಲಿ ಈಗಾಗಲೇ ಅನೇಕ ರಸ್ತೆ ಕಾಮಗಾಗಿ ನಡೆಸಲಾಗಿದೆ. ಇನ್ನೂ ಬಾಕಿ ಉಳಿದಿರುವ ಗುಂಡಿ ರಸ್ತೆಗಳು, ಕಾಡಾನೆ ಹಾವಳಿ ಸೇರಿದಂತೆ ತಾಲೂಕಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರಧ್ವಜಾರೋಹಣವನ್ನು ತಹಸೀಲ್ದಾರ್ ಎಸ್.ಅಶ್ವಿನಿ ನೆರವೇರಿಸಿದರು. ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್, ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸದಸ್ಯರಾದ ಅನುಕುಮಾರ್, ಮನೋಜ್, ಸುಧೀರ್, ಹಂಜಾ, ತಾ.ಪಂ. ಇಒ ದಯಾವತಿ, ಸಿಪಿಐ ರಾಜಶೇಖರ್, ಬಿಇಒ ಮೀನಾಕ್ಷಿ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕೆಡಿಪಿ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.



