ಸಕಲ ಸಂಪತ್ತು ನೀಡುವ ವರಮಹಾಲಕ್ಷ್ಮಿಯನ್ನು ಶ್ರಾವಣ ಮಾಸದಲ್ಲಿ ಶುಕ್ರವಾರ ಪೂಜೆ ನೆರವೇರಿಸಿದರೆ ಎಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್ಕುಮಾರ್ ತಿಳಿಸಿದರು.
ಅವರು ಶುಕ್ರವಾರ ನಗರದ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಏರ್ಪಡಿಸಲಾಗಿದ್ದ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ೨೫ ವರ್ಷಗಳಿಂದ ಬಿಜೆಪಿ ಕಚೇರಿಯಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸುತ್ತಾ ಬರುತ್ತಿದ್ದು, ಸುಮಾರು ೨೦೦ ಮಹಿಳೆಯರು ಈ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ತಾಯಿ ವರಮಹಾಲಕ್ಷ್ಮಿ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ನೀಡಲಿ ಎಂದು ಶುಭ ಹಾರೈಸಿದರು.
ಬಿಜೆಪಿಯಲ್ಲಿ ಧಾರ್ಮಿಕತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಪೂಜೆಗೆ ವಿಶೇಷ ಪ್ರಾಧ್ಯಾನತೆ ನೀಡಿದ್ದಾರೆ ಎಂದು ಶ್ಲಾಘಿಸಿ ಪೂಜೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಹರಿಶಿನ-ಕುಂಕುಮ, ಹೂವು-ಬಳೆ ಫಲತಾಂಬಲವನ್ನು ನೀಡಿ ಗೌರವಿಸುತ್ತೇವೆ. ಜಿಲ್ಲೆಯ ೯ ತಾಲ್ಲೂಕುಗಳ ಮಂಡಲ ಅಧ್ಯಕ್ಷರುಗಳಿಗೆ ಆಹ್ವಾನ ನೀಡಲಾಗಿದ್ದು, ಅದರಂತೆ ಎಲ್ಲಾ ಮಂಡಲ ಸಮಿತಿಯವರನ್ನು ಕರೆತಂದಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ನಗರ ಮಂಡಲ ಅಧ್ಯಕ್ಷರಾದ ಪವಿತ್ರ, ಗ್ರಾಮಾಂತರ ಲೀಲಾಪರಮೇಶ್, ಕಡೂರು ಲತಾ, ತರೀಕೆರೆ ಶೃತಿ, ಶೃಂಗೇರಿ ಭಾಗ್ಯ, ಕೊಪ್ಪ ಅನುಸೂಯ, ಮೂಡಿಗೆರೆ ಕಾಮಾಕ್ಷಿ ಹಾಗೂ ಎನ್.ಆರ್ ಪುರ ಮಂಡಲದ ಅಧ್ಯಕ್ಷರು ಭಾಗವಹಿಸಿದ್ದಾರೆ ಎಂದರು.
ಪಲ್ಲವಿ ಸಿ.ಟಿ. ರವಿ ಮಾತನಾಡಿ, ಮಹಿಳಾ ಮೋರ್ಚಾದಿಂದ ಆಚರಿಸಿಕೊಂಡು ಬರುತ್ತಿರುವ ವರಮಹಾಲಕ್ಷ್ಮಿ ಪೂಜೆ ಯಶಸ್ವಿಯಾಗಿದ್ದು, ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ಕರುಣಿಸಲಿ ಎಂದು ಹಾರೈಸಿದರು.
ಉಪಾಧ್ಯಕ್ಷೆ ವೀಣಾಶೆಟ್ಟಿ ಮಾತನಾಡಿ, ತಮ್ಮ ತಮ್ಮ ಮನೆಯಲ್ಲಿ ಚಿಕ್ಕದಾಗಿ ಆರಂಭಿಸಿದ ವರಮಹಾಲಕ್ಷ್ಮಿ ಪೂಜೆ ಇಂದು ದೊಡ್ಡಮಟ್ಟದಲ್ಲಿ ಆಚರಣೆಯಾಗುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯರನ್ನು ಆಹ್ವಾನಿಸಿ ಬಾಗಿನ ಅರ್ಪಿಸಿರುವುದು ಧಾರ್ಮಿಕ ಭಾವನೆ ಬೆಳೆಯಲು ಪೂರಕವಾಗಿದೆ ಎಂದರು.
ಚಿಕ್ಕಮಗಳೂರಿನಲ್ಲಿ ಆರಂಭವಾದ ವರಮಹಾಲಕ್ಷ್ಮಿ ಪೂಜೆ ಬಿಜೆಪಿ ವತಿಯಿಂದ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ಖಜಾಂಚಿ ನಾರಾಯಣಗೌಡ, ಮುಖಂಡರಾದ ಸಿ.ಹೆಚ್. ಲೋಕೇಶ್, ಕೋಟೆ ರಂಗನಾಥ್, ಶೃತಿ, ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.



