ಪ್ರೇಮ ವೈಪಲ್ಯದಿಂದ ಮನನೊಂದು ಯುವಕನೊಬ್ಬ ಯುವತಿಗೆ ನಡು ರಸ್ತೆಯಲ್ಲಿ ಚಾಕು ಇರಿದಿ ಗಾಯಗೊಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಪಟ್ಟಣದ ಕಾವೇರಿ ನರ್ಸಿಂಗ್ ಹೋಂ ನಲ್ಲಿ ಲ್ಯಾಬ್ ಟೆಕ್ನಿಸಿಯನ್ ಆಗಿ ಕೆಲಸ ಮಾಡುತ್ತಿದ್ದ ಕೊಪ್ಪ ತಾಲ್ಲೂಕು ಗುಡ್ಡೆತೋಟ ಮೂಲದ 24 ವರ್ಷದ ಯುವತಿಗೆ ಜಯಪುರ ಮೂಲದ ಮೋಹನ್ ಕುಮಾರ್ ಎಂಬಾತ ಚಾಕು ಇರಿದಿದ್ದಾನೆ. ಇವರಿಬ್ಬರ ನಡುವೆ ಪ್ರೀತಿ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಶುಕ್ರವಾರ ಕಳಸಕ್ಕೆ ಬಂದಿದ್ದ ಮೋಹನ್ ಮಧ್ಯಾಹ್ನ ಊಟದ ಸಮಯದಲ್ಲಿ ಆಸ್ಪತ್ರೆಯ ಮುಂಭಾಗದ ಮಹಾವೀರ ರಸ್ತೆಯ ನಡುವೆ ಇರುವ ಓಣಿಯಲ್ಲಿ ಹೋಗುತ್ತಿರುವಾಗ ಏಕಾಏಕಿ ಯುವತಿ ಬೆನ್ನಿಗೆ ಚಾಕುವಿನಿಂದ ಇರಿದು, ತಲೆಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾನೆ.
ಹಲ್ಲೆಯಿಂದ ಯುವತಿಯ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಕಳಸದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.
ಕಳಸ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಯುವಕ ಸ್ಥಳದಿಂದ ತಪ್ಪಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಗಳಲ್ಲಿ ಸೆರೆಯಾಗಿದೆ. ಯುವಕನ ಪತ್ತೆಗೆ ಜಾಲ ಬೀಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಪ್ರೇಮ ವೈಪಲ್ಯವೇ ಕಾರಣ : ಮೋಹನ್ ಕುಮಾರ್ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇತ್ತೀಚೆಗೆ ಕೆಲ ಸಮಯದಿಂದ ಯುವತಿ ಮೋಹನ್ ಕುಮಾರ್ ನನ್ನು ಬಿಟ್ಟು ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು, ಮೋಹನ್ ಕುಮಾರ್ ನನ್ನು ದೂರ ಮಾಡಿದ್ದಳು ಎಂದು ತಿಳಿದುಬಂದಿದೆ. ಇದರಿಂದ ಮನನೊಂದು ಮೋಹನ್ ಕುಮಾರ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಯುವತಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದ ಎನ್ನಲಾಗಿದೆ. ಆದರೆ ಯುವತಿಯ ಮೇಲೆ ಹಲ್ಲೆ ಮಾಡುವಾಗ ಆಕೆಯ ಕೂಗು ಕೇಳಿ ಜನ ಸೇರಿದ್ದರಿಂದ ಮೋಹನ್ ಕುಮಾರ್ ಸ್ಥಳದಿಂದ ಕಾಲ್ಕಿತ್ತಿದ್ದ, ಕಳಸಕ್ಕೆ ಬಸ್ಸಿನಲ್ಲಿ ಬಂದಿದ್ದ ಈತ ನಂತರ ಆಟೋ, ಬೈಕ್ ಹೀಗೆ ಸಿಕ್ಕ ಸಿಕ್ಕ ವಾಹನಗಳ ಮೂಲಕ ಕೊಟ್ಟಿಗೆಹಾರ ತಲುಪಿದ್ದ, ಪೊಲೀಸರು ಈತನ ಬೆನ್ನತ್ತಿ ಕೊಟ್ಟಿಗೆಹಾರದಲ್ಲಿ ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಆಗುವ ವೇಳೆ ಆತನ ಬಳಿ ವಿಷದ ಬಾಟಲಿ ಪತ್ತೆಯಾಗಿದೆ.



