ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕ್ರೈಸ್ತ ಮುಖಂಡರನ್ನು ಕಡೆಗಣಿಸಲಾಗಿದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳ ಬೇಕಾಗುತ್ತದೆ ಎನ್ನುವ ಎಚ್ಚರಿಕೆ ಹೊರಬಿದ್ದಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೂಬೆನ್ ಮೋಸಸ್ ಕಳೆದ ಮೂರು ನಾಲ್ಕು ದಶಕಗಳಿಂದ ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿದಿದ್ದರೂ ಕ್ರಿಶ್ಚನ್ ಮುಖಂಡರನ್ನು ಗುರುತಿಸುವಲ್ಲಿ ಪಕ್ಷ ವಿಫಲವಾಗಿದೆ ಎಂದು ಆರೋಪಿಸಿದರು.
ಚುನಾವಣೆ ಸಂದರ್ಭದಲ್ಲಿ ಹಣ ಸೇರಿದಂತೆ ಯಾವುದೇ ಬೇಡಿಕೆಗಳನ್ನು ಮುಂದಿಡದೆ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದರೂ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ಆಕ್ಷೇಪಿಸಿದರು.
ಪಕ್ಷಕ್ಕೆ ಇತ್ತೀಚಿಗೆ ವಲಸೆ ಬಂದವರಿಗೆ, ಬಲಾಢ್ಯ ಕೋಮಿನವರಿಗೆ ವಿವಿಧ ನೇಮಕಾತಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ, ಸಣ್ಣ ಪುಟ್ಟ ಜಾತಿಗಳಿಗೆ ಸ್ಥಾನಮಾನ ಕಲ್ಪಿಸದೆ ಕಡೆಗಣಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಹತ್ತಾರು ಮುಖಂಡರು ಪಕ್ಷಕ್ಕಾಗಿ ಶ್ರಮಿಸಿದ್ದರು ಕಡೆಗಣಿಸಲಾಗಿದೆ ಎಂದು ಬೇಸರ ಹೊರ ಹಾಕಿದರು.
ರಾಜಕಾರಣಿಗಳ ಕಾಲಿಗೆ ಬೀಳೋದು ,ಬಕೆಟ್ ಹಿಡಿಯೋದು, ಮನೆ ಬಾಗಿಲಿಗೆ ಹೋಗಿ ಕೈಕಟ್ಟಿ ನಿಲ್ಲುವ ಜಾಯಮಾನ ತಮ್ಮ ಸಮುದಾಯ ಮಾಡುತ್ತಿಲ್ಲ ಹೀಗಾಗಿ ಅಧಿಕಾರ ಸಿಗುತ್ತಿಲ್ಲ ಎಂದರು.
ಕೊರೋನಾ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ತಮ್ಮ ಸಮುದಾಯ ಸಲ್ಲಿಸಿದ ಸೇವೆಗೂ ಪಕ್ಷ ಬೆಲೆ ನೀಡಲಿಲ್ಲ ಎಂದು ಅಸಮಾಧಾನ ಹೊರಹಾಕಿ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.



