ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಹಾಗೂ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳ್ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಒಕ್ಕಲಿಗರ ಸಂಖ್ಯೆ ಅಧಿಕವಿರುವುದರಿಂದ ಕಳೆದ 8 ವರ್ಷದ ಹಿಂದೆ ಕೆಂಪೇಗೌಡ ಒಕ್ಕಲಿಗರ ವೇದಿಕೆ ಪ್ರಾರಂಭಿಸಿ ರಿಜಿಸ್ಟರ್ ಮಾಡಿಸಲಾಯಿತು. ನಂತರ ಸಾಮಾಜಿಕ ಜಾಲಾ ತಾಣದ ಮೂಲಕ ಸಮುದಾಯದವರನ್ನು ಸಂಘಟಿಸುವ ಕಾರ್ಯ ನಡೆಸಿ, ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಅಲ್ಲದೇ ಸಮುದಾಯದ ಜನರಿಗೆ ಸಂಘಟನೆ ಮೂಲಕ ಆರೋಗ್ಯ ಸಮಸ್ಯೆ, ವಿದಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸಹಕಾರ ನೀಡುವ ಜತೆಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಸಂಘಟನೆ ಏಳಿಗೆಗೆ ಶ್ರಮಿಸಲಾಗಿದೆ. ಇದೀಗ ವೇದಿಕೆಯ ಕಾರ್ಯಕಾರಿ ಸಮಿತಿ ಹಾಗೂ ಹಿರಿಯರ ಸಲಹೆ ಮೇರೆಗೆ ಸಂಘಟನೆ ಇನ್ನಷ್ಟು ಬಲಪಡಿಸಲು ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಪ್ರಸಾಧ್ ಬಕ್ಕಿ ಮಾತನಾಡಿ, ಮೊದಲು ಮೂಡಿಗೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಾರ್ಚ್ ಅಂತ್ಯದವರೆಗೆ ಸದಸ್ಯತ್ವ ಅಭಿಮಾನ ನಡೆಯಲಿದೆ. ನಂತರ ಉಳಿದ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದುರೆಸಲಾಗುವುದು. ಸದಸ್ಯತ್ವ ಪಡೆದವರಿಗೆ ಮಾತ್ರ ಐಡಿ ಕಾರ್ಡ್ ವಿವಿಧ ಬಗೆಯ ಸವಲತ್ತು ಪಡೆಯಲು ಅರ್ಹರಾಗಿರುತ್ತಾರೆ. ಇದರಿಂದ ಸಮುದಾಯದ ಜನರಿಗೆ ಅನುಕೂಲವಾಗುವ ಜತೆಗೆ ಸಂಘಟನೆ ಶಕ್ತಿ ಇನ್ನಷು ಹೆಚ್ಚುತ್ತದೆ ಎಂದ ಅವರು, ಇಲ್ಲಿನ ಪ.ಪಂ. ಪಟ್ಟಣದಲ್ಲಿ ವೇದಿಕೆಯ ಕಚೇರಿ ಸ್ಥಾಪನೆಗೆ ಹಾಗೂ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ನಿರ್ಮಾಣಕ್ಕೆ ಜಾಗ ಮೀಸಲಿರಿಸಬೇಕೆಂದು ಒತ್ತಾಯಿಸಿದರು.
ವೇದಿಕೆ ಕಾರ್ಯದರ್ಶಿ ಪವನ್ ಪಟ್ಟದೂರು, ಉಪಾಧ್ಯಕ್ಷ ಅಶ್ವಥ್ ಬೆಟ್ಟಗೆರೆ, ಮುಖಂಡರಾದ ದಯಾನಂದ್ ಕೆಸವೊಳಲು, ಡಿ.ಕೆ.ಲಕ್ಷ್ಮಣ್ಗೌಡ, ಸುರೇಶ್ ಕಣಚೂರು ಉಪಸ್ಥಿತರಿದ್ದರು.



