ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮೂಡಿಗೆರೆ ತಾಲ್ಲೂಕು ಘಟಕ ಮತ್ತು ಜಿಲ್ಲಾ ಘಟಕ ಇವರ ವತಿಯಿಂದ ಶ್ರವಣದೋಷ ಹೊಂದಿದ್ದು, ಗುರುತಿಸಲಾದ 5 ಮಂದಿ ಫಲಾನುಭವಿಗಳಿಗೆ ‘ಶ್ರವಣ ಸಾಧನ’ಗಳನ್ನು ಮೂಡಿಗೆರೆ ತಾಲ್ಲೂಕು ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.*
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪರವಾಗಿ ಮಾನ್ಯ ತಹಸೀಲ್ದಾರರು ಮತ್ತು ಸಂಸ್ಥೆಯ ಪದನಿಮಿತ್ತ ಅಧ್ಯಕ್ಷರೂ ಆದಂತಹ ಶ್ರೀಮತಿ. ಅಶ್ವಿನಿ ಅವರು ಫಲಾನುಭವಿಗಳಿಗೆ ಶ್ರವಣ ಸಾಧನಗಳನ್ನು ವಿತರಿಸಿ ವಿಪತ್ತು ನಿರ್ವಹಣೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ‘ಭಾರತೀಯ ರೆಡ್ ಕ್ರಾಸ್ ಸಂಸ್ಥೆ’ಯ ಸೇವಾ ಕಾರ್ಯಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಈ ಭಾಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗುವ ಮೂಲಕ ಸಂಸ್ಥೆಯನ್ನು ಬಲಪಡಿಸುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚಿಕ್ಕಮಗಳೂರು ಜಿಲ್ಲಾ ಘಟಕದ ಸಭಾಪತಿಗಳಾದ ಪ್ರದೀಪ್ ಗೌಡ ಅವರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಹಾಗೂ ವಿಪತ್ತು ನಿರ್ವಹಣಾ ಕಾರ್ಯಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮತ್ತು ಸ್ವಸ್ಥ – ಸುಸ್ಥಿರ ಸಮಾಜದ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯತ್ವವನ್ನು ಪಡೆಯುವುದರ ಮೂಲಕ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಂಸ್ಥೆಯ ಮಾನವೀಯ ಚಟುವಟಿಕೆಗಳಿಗೆ ಬೆಂಬಲಿಸುವಂತೆ ಕೋರಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ – ಮೂಡಿಗೆರೆ ತಾಲ್ಲೂಕು ಘಟಕದ ಸಭಾಪತಿಗಳಾದ ಪ್ರವೀಣ್ ಬಣಕಲ್, ಉಪ ಸಭಾಪತಿಗಳಾದ ಪೂರ್ಣೇಶ್ ಮತ್ತಾವರ, ಕಾರ್ಯದರ್ಶಿ ಹರ್ಷ ಹಳೇಕೋಟೆ, ನಿರ್ದೇಶಕರುಗಳಾದ ಪ್ರಶಾಂತ್.ಎಂ.ಎ, ಮರೆಬೈಲ್ , ಅಕ್ಷತ್ ಪಟ್ಟದೂರು ಹಾಗೂ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಜಯರಾಂ ಬಿದರಹಳ್ಳಿ, ಸೀನಿಯರ್ ಜೇಸಿಸ್ ಸಂಸ್ಥೆಯ ಮನಮೋಹನ್, ರೋಟರಿ ಸಂಸ್ಥೆಯ ವಿನೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.



