ಕಸ ಎತ್ತುವುದು ಸಣ್ಣ ಕೆಲಸವೆಂದು ಯಾರೂ ಭಾವಿಸಬಾರದು ಇದು ಸಮಾಜದ ದೊಡ್ಡ ಜವಾಬ್ದಾರಿ. ನಮ್ಮ ಊರು, ನಮ್ಮ ಪರಿಸರವನ್ನು ಸ್ವಚ್ಛವಾಗಿಡುವುದು ನಾಗರೀಕರ ಕರ್ತವ್ಯವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ಯೋಜನಾಧಿಕಾರಿ ಸದಾನಂದ ಬಂಗೇರಾ ಹೇಳಿದರು.
ಅವರು ಬುಧವಾರ ವಿವಿಧ ಸಂಘ ಸಂಸ್ಥೆಗಳಿಂದ ತಾಲೂಕಿನ ಜನ್ನಾಪುರದಿಂದ ಕೊಟ್ಟಿಗೆಹಾರ ವರೆಗೆ ಹಮ್ಮಿಕೊಂಡಿದ್ದ ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಛತೆ ಇಲ್ಲದಿದ್ದರೆ ಪರಿಸರ ಕಲುಷಿತಗೊಂಡು ಸಾಂಕ್ರಾಮಿಕ ರೋಗ ಹರಡುತ್ತದೆ. ಸ್ವಚ್ಛತೆ ಕಾಪಾಡುವುದು ಕೇವಲ ಸರಕಾರದ ಕೆಲಸವಲ್ಲ. ನಮ್ಮ ಮನೆ, ರಸ್ತೆ, ಶಾಲೆ, ದೇವಾಲಯ, ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ಸ್ವಚ್ಛತೆ ಕಾಪಾಡುವುದು ನಮ್ಮ ನೈತಿಕ ಹೊಣೆಗಾರಿಕೆಯಾಗಿದೆ. ಮುಖ್ಯವಾಗಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಲ್ಲಿಸಬೇಕಾಗಿದೆ. ಇಂದು ವಿವಿಧ ಸಂಘಟನೆಗಳ ಸಹಕಾರದಿಂದ ನಾವು ಕೈಗೆ ಗ್ಲೌವ್ಸ್ ಮತ್ತು ಚೀಲ ಹಿಡಿದು ಕಸ ಎತ್ತುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದರೆ ಸಾಲದು. ಇನ್ನು ಮುಂದೆ ಎಲ್ಲರೂ ಪರಿಸರವನ್ನು ಸ್ವಚ್ಛವಾಗಿಡೋಣ, ಇತರರಿಗೂ ಅರಿವು ಮೂಡಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣವೆಂದು ಕರೆ ನೀಡಿದರು.

ಧರ್ಮಸ್ಥಳ ಯೋಜನೆಯ ತಾಲೂಕು ಯೋಜನಾಧಿಕಾರಿ ಸುಧೀರ್ ಜೈನ್, ಶೌರ್ಯ ವಿಪತ್ತಿನ ತಾಲೂಕು ಮಾಸ್ಟರ್ ಪ್ರವೀಣ್ ಪೂಜಾರಿ, ತೋಟಗಾರಿಕೆ ಮಹಾ ವಿದ್ಯಾಲಯದ ಎನ್ಎಸ್ಎಸ್ ಕೋಡಿನೇಟರ್ ಗಳಾದ ನವೀನ್, ಸಂಕಲ್ಪ, ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳ್, ಕಾರ್ಯದರ್ಶಿ ಪ್ರಸಾಧ್ ಬಕ್ಕಿ, ಕರವೇ ಅಧ್ಯಕ್ಷ ವಿನೋದ್ ಕುಮಾರ್, ಸಂಜಯ್ ಕೊಟ್ಟಿಗೆಹಾರ, ಪರೀಕ್ಷಿತ್ ಸೇರಿದಂತೆ 500ಕ್ಕೂ ಅಧಿಕ ಮಂದಿ ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
**************
ಸ್ವಚ್ಛತೆ ಬಗ್ಗೆ ಮಾದ್ಯಮಗಳು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಆದರೂ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ರಾಶಿ ಬಿದ್ದಿರುವುದು ದುರಂತ. ಇಂದು ನಡೆಸು ಸ್ವಚ್ಛತೆ ಕಾರ್ಯದಲ್ಲಿ ಜನ್ನಾಪುರದಿಂದ ಕೊಟ್ಟಿಗೆಹಾರ ವ್ಯಾಪ್ತಿಗೊಳಪಡುವ ತರುವೆ ಮತ್ತು ಬೆಟ್ಟಗೆರೆ ಗ್ರಾ.ಪಂಯ ಕಸದ ವಾಹನ ಹಾಗೂ ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಆದರೆ ಬಣಕಲ್, ಬಿದರಹಳ್ಳಿ , ಹಳೆಮೂಡಿಗೆರೆ ಗ್ರಾ.ಪಂ.ಯಿಂದ ಕಸ ಸಂಗ್ರಹಣೆ ವಾಹನ ಕಳಿಸಿದ್ದು ಬಿಟ್ಟರೆ ಸಿಬ್ಬಂದಿ ಇತ್ತ ಸುಳಿದಿಲ್ಲ. ಇನ್ನು ಪಲ್ಗುಣಿ ಗ್ರಾ.ಪಂ.ಯಿಂದ ವಾಹನ ಕಳಿಸುವುದಿರಲಿ, ಸಿಬ್ಬಂದಿ ಕೂಡ ತಲೆ ಹಾಕಿಲ್ಲ. ಇದರಿಂದ ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದ ಸಂಘ ಸಂಸ್ಥೆ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು.



