ಕ್ರೀಡೆ ಎಂದರೆ ಕೇವಲ ಮನರಂಜನೆ ಮಾತ್ರವಲ್ಲ. ಅದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವ ಒಂದು ಶಕ್ತಿಯಾಗಿದೆ ಎಂದು ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಡಿ.ಕೆ.ಲಕ್ಷ್ಮಣ್ಗೌಡ ಹೇಳಿದರು.
ಅವರು ಭಾನುವಾರ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದ ಸರಕಾರಿ ಶಾಲೆ ಆವರಣದಲ್ಲಿ ಕುಂದೂರು ಶ್ರೀರಾಮೇಶ್ವರ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಅಂತರ್ ಜಿಲ್ಲಾಮಟ್ಟದ ಹೊನಲು ಬೆಳಕಿನ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಬಾಲ್ ಬ್ಯಾಡ್ಮಿಂಟನ್ ನಮ್ಮ ದೇಶದ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ವೇಗ, ಚಾತುರ್ಯ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಗ್ರಾಮದ ಮುಖಂಡ ಕೆ.ಆರ್.ಸುಂದ್ರೇಶ್ ಮಾತನಾಡಿ, ಕ್ರೀಡೆ ನಶಿಸಿಹೋಗುವ ಸಂದರ್ಭದಲ್ಲಿ ಮರು ಜೀವ ತುಂಬುವ ದೃಷ್ಟಿಯಿಂದ ಪ್ರತಿ ವರ್ಷ ಬಾಲ್ ಬ್ಯಾಡ್ಮಿಂಟನ್ ಕ್ರೀಡೆ ನಡೆಸಲಾಗುತ್ತಿದೆ. ಇದಕ್ಕೆ ಸ್ಥಳೀಯ ಗ್ರಾಮಸ್ಥರು ಹಾಗೂ ದಾನಿಗಳು ಸಹಕಾರ ನೀಡುತ್ತಿರುವುದರಿಂದ ಯಶಸ್ವಿಯಾಗಿ ಕ್ರೀಡೆ ನಡೆಯುತ್ತಿದೆ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ಹೊರ ಜಿಲ್ಲೆಯಿಂದ 14 ತಂಡ, ಚಿಕ್ಕಮಗಳೂರು ಜಿಲ್ಲೆಯಿಂದ 10 ತಂಡ ಭಾಗವಹಿಸಿತ್ತು. ಅಂತರ್ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಭದ್ರಾವತಿ ತಂಡ, ದ್ವಿತೀಯ ಸ್ಥಾನ ಕೆಆರ್ಎಸ್ ಮೈಸೂರು ತಂಡ ಪಡೆಯಿತು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮೈಲಿಮನೆ ತಂಡ, ದ್ವಿತೀಯ ಸ್ಥಾನ ಕುಂದೂರು ತಂಡ ಗಳಿಸಿತು.
ಕುಂದೂರು ಶ್ರೀರಾಮೇಶ್ವರ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಕೆ.ಕೆ.ಸುನೀಲ್, ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ನ ತಾಲೂಕು ಅಧ್ಯಕ್ಷ ಕೆ.ಜೆ.ಪ್ರಸನ್ನ, ಗ್ರಾಮಸ್ಥರಾದ ಕೆ.ಬಿ.ಮಂಜುನಾಥ್, ಕೆ.ಎಂ.ಚಂದ್ರೇಗೌಡ, ಕೆ.ಬಿ.ಲಕ್ಷ್ಮಣ್, ಕೆ.ಎಸ್.ನಾರಾಯಣಗೌಡ, ನೈಜಿಲ್ ಸಾಲ್ಡಾನ, ಕೆ.ಎಸ್.ರಾಜಶೇಖರ್ ಮತ್ತಿತರರಿದ್ದರು.



