ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ವಿದ್ಯಾರ್ಥಿನಿ, ಕನ್ನಡ ಉಪನ್ಯಾಸಕಿ ಬಿ.ಎಸ್.ದೀಪರಾಣಿ ಅವರು ತಮ್ಮ ಅಧ್ಯಯನದ ಭಾಗವಾಗಿ ಬರೆದಿದ್ದ ಕುವೆಂಪು ಅವರ ವೈಚಾರಿಕ ಚಿಂತನೆ ಮತ್ತು ಸಮಕಾಲೀನತೆ ಎಂಬ ಸಂಶೋಧನಾ ಲೇಖನಕ್ಕೆ ಅತ್ಯುತ್ತಮ ಲೇಖನ ಪ್ರಶಸ್ತಿ ಲಭಿಸಿದೆ.
ಕನ್ನಡ ಸಂಶೋಧನೆಯ ವಿಧಿ ವಿಧಾನಗಳು ಮತ್ತು ಹೊಸ ಸಾಧ್ಯತೆಗಳು ಎಂಬ ಮುಕ್ತ ಬೃಹತ್ ಆನ್ಲೈನ್ ಕೋರ್ಸ್ ಅನ್ನು ಬೆಂಗಳೂರಿನ ಕನ್ನಡ ಸಂಶೋಧನಾ ಅಕಾಡೆಮಿ ಆಯೋಜಿಸಿತ್ತು. ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಬರೆದ ಸಂಶೋಧನಾ ಲೇಖನ ಇದಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕನ್ನಡ ಸಂಶೋಧನಾ ಅಕಾಡೆಮಿಯ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಂಶೋಧನಾ ಅಕಾಡೆಮಿಯ ಅಧ್ಯಕ್ಷರಾದ ಡಾ.ರವಿಕುಮಾರ ಪಿ.ಜಿ., ಪ್ರಧಾನ ಕಾರ್ಯದರ್ಶಿ ಡಾ.ನಾಗೇಶ್ ಎನ್., ನಿರ್ದೇಶಕ ಡಾ.ಕಿರಣ ಕುಮಾರ್ ಹೆಚ್.ಜಿ ಮುಂತಾದವರಿದ್ದರು.
ದೀಪರಾಣಿ ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದ ಕೃಷಿಕರಾದ ಬಿ.ಎ.ಸದಾನಂದ, ಟಿ.ಎಸ್.ಗೀತ ದಂಪತಿಯ ಪುತ್ರಿ. ಲೇಖನ ಉಪನ್ಯಾಸಕ ಡಾ.ಸಂಪತ್ ಬೆಟ್ಟಗೆರೆ ಅವರ ಸಹೋದರಿ. ದೀಪಾರಾಣಿ ಚಿಕ್ಕಮಗಳೂರು ಖಾಸಗಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.



